ಸೆಪ್ಟೆಂಬರ್‌ನಲ್ಲಿ ಹೆಚ್ಚುವರಿ ಅಕ್ಕಿ ವಿತರಣೆ ಪ್ರಯತ್ನ – ಸಚಿವ ಕೆ.ಎಚ್. ಮುನಿಯಪ್ಪ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಎಲ್ಲ ಸದಸ್ಯರಿಗೆ ಪ್ರತಿ ತಿಂಗಳಿಗೆ ತಲಾ ಐದು ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ಸೆಪ್ಟೆಂಬರ್ ತಿಂಗಳಿನಿಂದಲೇ ವಿತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು ಎನ್ನಲಾಗಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಅಕ್ಕಿ ಪೂರೈಕೆಗೆ ಆಸಕ್ತಿ ವ್ಯಕ್ತಪಡಿಸಿದ್ದು, ಹೆಚ್ಚಿನ ದರದಲ್ಲಿ ಖರೀದಿ ಸಾಧ್ಯವಿಲ್ಲ. ಆದ್ದರಿಂದ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್‌) ಅಡಿಯಲ್ಲಿ ನಿಗದಿಪಡಿಸುವ ದರದಲ್ಲಿ ಅಕ್ಕಿ ಪೂರೈಸಿದರೆ ಖರೀದಿಗೆ ನಾವು ಸಿದ್ಧ ಎಂದು ಎರಡೂ ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದೇವೆ’ ಎಂದರು. ಜುಲೈ ತಿಂಗಳಲ್ಲಿ ಒಂದು ಕೋಟಿ ಕುಟುಂಬಗಳಿಗೆ ₹ 566 ಕೋಟಿಯನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗಿದ್ದು, ಎಫ್‌ಸಿಐ ದರಕ್ಕೆ ಅಕ್ಕಿ ಪೂರೈಸಲು ಪೂರೈಕೆದಾರರು ಒಪ್ಪದೇ ಇದ್ದರೆ ಮಾತ್ರ ಕೆಲವು ತಿಂಗಳ ಕಾಲ ವಿಳಂಬವಾಗಬಹುದು ಎಂದು ಹೇಳಿದರು.

Scroll to Top