ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆಯಪ್ ಕಾರ್ಯಾಚರಣೆ- ಎಚ್ಚರವಹಿಸುವಂತೆ ಎಸ್.ಪಿ ಮನವಿ

(ನ್ಯೂಸ್ ಕಡಬ) newskadaba.com ಉಡುಪಿ, ಜು. 17. ಸೈಬರ್ ಕಳ್ಳರು ನಕಲಿ ಅ್ಯಪ್ ಗಳ ಮೂಲಕ ಸರಕಾರದ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರ ವೈಯುಕ್ತಿಕ ಮಾಹಿತಿ ಕಲೆ ಹಾಕಿ ದುರ್ಬಳಕೆ ಮಾಡಿಕೊಳ್ಳುವ ಸಂಭವವಿದ್ದು, ಈ ಹಿನ್ನೆಲೆ ಜನಸಾಮಾನ್ಯರು ಎಚ್ಚರಿಕೆ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ತಿಳಿಸಿದ್ದಾರೆ.

ಈಗಾಗಲೇ ಸರಕಾರದ ಉಚಿತ ಯೋಜನೆಗಳಾದ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣಗಳಲ್ಲಿ ನಕಲಿ ಅಪ್ಲಿಕೇಷನ್ ಗಳು ಕಾರ್ಯಾಚರಿಸುತ್ತಿದ್ದು, ಅವುಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ್ ನ್ನು ಬಳಸಬಾರದು ಎಂದಿದ್ದಾರೆ.

ಈ ರೀತಿಯಾದ ನಕಲಿ ಲಿಂಕ್ ಕ್ಲಿಕ್ ಮೂಲಕ ನಿಮ್ಮ ಪರ್ಸನಲ್ ಮಾಹಿತಿಗಳು ಸೋರಿಕೆಯಾಗಬಹುದು. ಯಾವುದೇ ಹೆಲ್ಪ್ ಡೆಸ್ಕ್ ನಿಂದ ಕರೆ ಮಾಡಿ ನೀವು ಈ ಯೋಜನೆಗೆ ಆಯ್ಕೆಯಾಗಿದ್ದಿರಿ ನಿಮ್ಮ ವೈಯುಕ್ತಿಕ ವಿವರಗಳನ್ನು ನೀಡುವಂತೆ ತಿಳಿಸಿದ್ದಲ್ಲಿ ಕೂಡಾ ಯಾವುದೇ ಮಾಹಿತಿ ನೀಡಬಾರದು. ಸಾರ್ವಜನಿಕರು ಇಂತಹ ನಕಲಿ ಅಪ್ಲಿಕೇಷನ್ ಗಳ ಮೂಲಕ ತಮ್ಮ ವೈಯುಕ್ತಿಕ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ನೀಡಿ ಮೋಸಹೋಗಬೇಡಿ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರವು ಇದುವರೆಗೂ ಯಾವುದೇ ಅಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿಲ್ಲ. ಪ್ರಸ್ತುತ ಯೋಜನೆಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top