ದಾಖಲಾತಿ ಇಲ್ಲದೇ 20 ಲಕ್ಷ ರೂ. ಸಾಗಾಟ ➤ ಆರೋಪಿ ಸಹಿತ ನಗದು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೈಂದೂರು, ಮಾ. 17. ಸೂಕ್ತ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ.ಗಳನ್ನು ಆರೋಪಿ ಸಹಿತ ಬೈಂದೂರು ಠಾಣಾ ಪೊಲೀಸರು ವಶಪಡಿಸಿದ ಘಟನೆ ವರದಿಯಾಗಿದೆ.

ಬಂಧಿತನನ್ನು ಕಾರು ಚಲಾಯಿಸುತ್ತಿದ್ದ ಬೆಳ್ತಂಗಡಿ ಶಿರ್ಲಾಲು ಮಂಜಿಲಪಲ್ಕೆ ನಿವಾಸಿ ಬಶೀರ್ (42) ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯ ಗಡಿಭಾಗದ ಶಿರೂರು ಚೆಕ್‌ಪೋಸ್ಟ್‌ನಲ್ಲಿ ಮಾ.16ರಂದು ವಾಹನ ತಪಾಸಣೆ ನಡೆಸುತ್ತಿದ್ದ ಎಸ್‌ಐ ನಿರಂಜನಗೌಡ ಮತ್ತು ಸಿಬ್ಬಂದಿ ಭಟ್ಕಳದಿಂದ ಬಂದ ನೋಂದಣಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ತಡೆ ಹಿಡಿದು, ಕಾರನ್ನು ಪರಿಶೀಲಿಸಿದಾಗ ಹಿಂಬದಿ ಸೀಟಿನ ಕೆಳಗೆ ಪ್ಲಾಸ್ಟಿಕ್ ಬಂಡಲ್ ಇದ್ದು ಅದರಲ್ಲಿ ನಗದು ಕಂಡುಬಂದಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಚಾಲಕ ದಾಖಲೆ ನೀಡಲು ವಿಫಲನಾಗಿದ್ದಾನೆ. ಅದರಲ್ಲಿ 100 ರೂಪಾಯಿ ಮುಖಬೆಲೆಯ 3000 ನೋಟುಗಳು, 200 ರೂಪಾಯಿ ಮುಖಬೆಲೆಯ 1000 ನೋಟುಗಳು ಮತ್ತು 500 ರೂಪಾಯಿ ಮುಖಬೆಲೆಯ 3000 ನೋಟುಗಳು ಪತ್ತೆಯಾಗಿದ್ದು, ಒಟ್ಟು20 ಲಕ್ಷ ರೂ ಪತ್ತೆಯಾಗಿದೆ. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top