ದೀಪಕ್ ರಾವ್ ಹತ್ಯೆ ಖಂಡಿಸಿ ಕಡಬದಲ್ಲಿ ರಸ್ತೆ ತಡೆದು ಪ್ರತಿಭಟನೆ ► ರಾಜ್ಯ ಸರಕಾರದ ವಿರುದ್ಧ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ, ಜ.04. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 20 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಸಮುದಾಯದ ಮೇಲೆ ಮತಾಂಧ ದುಷ್ಕರ್ಮಿಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವವರ ಹಲ್ಲೆ, ಕೊಲೆಯು ಎಗ್ಗಿಲ್ಲದೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕಾನೂನನ್ನು ಪಾಲಿಸಬೇಕಾದ ಪೊಲೀಸ್ ಇಲಾಖೆಯು ರಾಜ್ಯ ಸರಕಾರದ ಹಸ್ತಕ್ಷೇಪದಿಂದಾಗಿ ಸಂಪೂರ್ಣ ಮೌನವಾಗಿದೆ. ರಾಜ್ಯದಲ್ಲಿ ತುಷ್ಟೀಕರಣ ಮಾಡುವ ಮೂಲಕ ಸಮುದಾಯವನ್ನು ಇಬ್ಭಾಗವಾಗಿಸುವ ಯತ್ನವನ್ನು ಸರಕಾರವು ಮಾಡುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

 

ಸರಸ್ವತೀ ವಿದ್ಯಾಲಯದ ಸಂಚಾಲಕರಾದ ವೆಂಕಟರಮಣ ರಾವ್ ಮಂಕುಡೆ ಮಾತನಾಡಿ, ಕೇವಲ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಂದೂ ಸಮುದಾಯ  ಯಾವ ನ್ಯಾಯವನ್ನೂ ಅಪೇಕ್ಷಿಸಲು ಸಾಧ್ಯವಿಲ್ಲ. ಜಾಗೃತ ಹಿಂದೂ ಸಮಾಜವನ್ನು ನಾವು ಕಟ್ಟಬೇಕಾಗಿದ್ದು, ನಮ್ಮ ಸಮಾಜಕ್ಕೆ ತೊಂದರೆಯಾದಾಗ ನ್ಯಾಯ ಕೇಳಲು ಪದೇ ಪದೇ ನಾವು ರಸ್ತೆಗೆ ಬಂದು ನಿಲ್ಲುವುದು ದುರದೃಷ್ಟಕರ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕೆಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಜನಾರ್ಧನ ರಾವ್, ವೆಂಕಟ್ರಮಣ ಕುತ್ಯಾಡಿ, ಕೃಷ್ಣಪ್ಪ ಮಡಿವಾಳ, ಕೃಷ್ಣ ಅಲುಂಗೂರು, ರಘುರಾಮ ಕೊಠಾರಿ, ಹರೀಶ್ ಉಂಡಿಲ, ಅಶೋಕ್ ಕುಮಾರ್, ಜಯರಾಂ ಆತರ್ಿಲ, ರಾಮಚಂದ್ರ ಕೋಲ್ಪೆ, ಮಧುಸೂದನ್ ಕೊಂಬಾರು ಮೊದಲಾದವರು ಭಾಗವಹಿಸಿದ್ದರು.

 

error: Content is protected !!

Join the Group

Join WhatsApp Group