(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.10. ವಂಚನೆ ಪ್ರಕರಣದಲ್ಲಿ ಐದು ವರ್ಷಗಳಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಮಹಿಳೆಯೊಬ್ಬರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಕೇರಳದ ಕಣ್ಣೂರಿನ ಪಯ್ಯನೂರಿನ ಪಣಚೇರಿಯ ನಿವಾಸಿ 42 ವರ್ಷದ ಸುಜಾತಾರನ್ನು ಬಂಧಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸುಜಾತಾ 5 ವರ್ಷಗಳ ಹಿಂದೆ ಕೋರ್ಟ್ಗೆ ಹಾಜರಾಗಲು ವಿಫಲರಾಗಿದ್ದರು. ಅವರಿಗೆ ಲುಕೌಟ್ ನೋಟೀಸ್ ನೀಡಲಾಗಿತ್ತು.

ವಿಟ್ಲ ಪೊಲೀಸ್ ಠಾಣೆಯಲ್ಲಿ ಸುಜಾತಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ ವಿಚಾರಣೆ ಹಾಜರಾಗದೇ ಹೋದ್ದರಿಂದ ಲುಕೌಟ್ ನೋಟೀಸ್ ಜಾರಿ ಮಾಡಲಾಗಿತ್ತು. ಸುಜಾತಾ ಕೇರಳದ ಕೋಳಿಕೋಡ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬಗ್ಗೆ ವಲಸೆ ಅಧಿಕಾರಿಗಳಿಂದ ವಿಟ್ಲ ಠಾಣೆಗೆ ಮಾಹಿತಿ ಬಂದಿತು. ವಲಸೆ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.






