(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.16. ಮಸೀದಿಯ ಕಟ್ಟಡವನ್ನು ವಿಸ್ತರಿಸಲು ಜಮೀನಿನ ಸಮಸ್ಯೆ ಬಂದಾಗ ದೇವಸ್ಥಾನವೊಂದರ ಅಧ್ಯಕ್ಷರು ತನಗೆ ಸೇರಿದ ಖಾಸಗಿ ಜಮೀನನ್ನು ಮಸೀದಿಗೆ ದಾನವಾಗಿ ನೀಡಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಘಟನೆ ಪುತ್ತೂರಿನ ಕೆಯ್ಯೂರು ಎಂಬಲ್ಲಿ ಶುಕ್ರವಾರದಂದು ನಡೆದಿದೆ.

ಕೆಯ್ಯೂರು ಸಮೀಪದ ಓಲೆಮುಂಡೋವು ದರ್ಗಾ ಹಾಗೂ ಮಸೀದಿಯ ಪಕ್ಕದಲ್ಲಿ ವಾಸವಾಗಿದ್ದ ಪ್ರಗತಿಪರ ಕೃಷಿಕರೂ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಮೋಹನ್ ರೈ ಎಂಬವರೇ ಮಸೀದಿಗೆ 12 ಸೆಂಟ್ಸ್ ಜಮೀನನ್ನು ದಾನವಾಗಿ ನೀಡಿದವರು. ಮಸೀದಿಯ ಕಟ್ಟಡವನ್ನು ವಿಸ್ತರಿಸಲು ಜಾಗದ ಸಮಸ್ಯೆ ಕಾಡಿದಾಗ ಮೋಹನ್ ರೈಯವರನ್ನು ಭೇಟಿ ಮಾಡಿದ ಆಡಳಿತ ಮಂಡಳಿಯವರಿಗೆ ತನ್ನ ಜಮೀನನ್ನು ದಾನವಾಗಿ ನೀಡಿ ಕರಾವಳಿಯಲ್ಲಿ ಮುಗ್ಧ ಯುವಕರ ನಡುವೆ ಮತೀಯ ಭಾವನೆಗಳನ್ನು ಕೆರಳಿಸಿ ಕೋಮುಬೀಜ ಬಿತ್ತಿ ತಮ್ಮ ಬೇಳೆ ಬೇಯಿಸುತ್ತಿದ್ದ ಎಲ್ಲಾ ಸಮುದಾಯದ ನಾಯಕರಿಗೆ ಮೋಹನ್ ರೈಯವರು ನಿಜವಾದ ನಾಯಕರಾದರು.

ಇತ್ತೀಚೆಗೆ ಸದಾ ಗಲಭೆಗಳಿಂದಲೇ ಸುದ್ದಿಯಲ್ಲಿರುವ ಕರಾವಳಿಯಲ್ಲಿ ಕೋಮು ಸೌಹಾರ್ದತೆಯೂ ನಡೆಯುತ್ತದೆ ಎನ್ನುವುದಕ್ಕೆ ಇದೂ ಒಂದು ನಿದರ್ಶನ.










