ಭಾರತಕ್ಕೆ ಗೆಲುವು ತಂದುಕೊಟ್ಟು ಕಣ್ಣೀರಿಟ್ಟ ಕೊಹ್ಲಿ..!

(ನ್ಯೂಸ್ ಕಡಬ) newskadaba.com ಅ.23: ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆದ ಬದ್ಧವೈರಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನ ಹೀರೋ ವಿರಾಟ್ ಕೊಹ್ಲಿ . ಏಕೆಂದರೆ ಕೇವಲ 31 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾವನ್ನು ಅಜೇಯರಾಗಿ ಉಳಿದು ಕೊಹ್ಲಿ ಗುರಿ ಮುಟ್ಟಿಸಿದ್ದರು. ಪಾಕಿಸ್ತಾನ್ ನೀಡಿದ 160 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 31 ರನ್​ಗಳಿಗೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾಗ್ಯೂ ಸ್ಥೈರ್ಯ ಕಳೆದುಕೊಳ್ಳದ ಕೊಹ್ಲಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು.

ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ (40) ಜೊತೆಗೂಡಿ 113 ರನ್​ಗಳ ಜೊತೆಯಾಟವಾಡಿದರು. ಆದರೆ ಅಂತಿಮ ಹಂತದವರೆಗೂ ಪಾಂಡ್ಯಗೆ ಬಿರುಸಿನ ಬ್ಯಾಟಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ನಿರ್ಣಾಯಕ ಓವರ್​ಗಳ ವೇಳೆ ಅಬ್ಬರಿಸಲಾರಂಭಿಸಿದ ವಿರಾಟ್ ಕೊಹ್ಲಿ ಇಡೀ ಪಂದ್ಯ ಚಿತ್ರಣ ಬದಲಿಸಿದರು. ಅದರಂತೆ ಕೊನೆಯ ಓವರ್​ನಲ್ಲಿ 16 ರನ್​ಗಳ ಟಾರ್ಗೆಟ್ ಪಡೆದ ಭಾರತಕ್ಕೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಗೆಲುವಿನ ಆಸೆಯನ್ನು ಕೊಹ್ಲಿ ಮತ್ತಷ್ಟು ಹೆಚ್ಚಿಸಿದರು. ಅಲ್ಲದೆ ಕೊನೆಯ ಓವರ್​ನಲ್ಲಿ ಬೌಲರ್​ನ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದ ಕೊಹ್ಲಿ ಗೆಲುವನ್ನು ಖಚಿತಪಡಿಸಿದರು.

ಅಂತಿಮ ಎಸೆತದಲ್ಲಿ ಅಶ್ವಿನ್ 1 ರನ್ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿತು. ಈ ರೋಚಕ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಸಂಭ್ರಮಿಸಿದರೂ ಆ ಬಳಿಕ ಭಾವುಕರಾದರು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ಖುಷಿಯಲ್ಲೇ ಕಣ್ಣೀರಾದರು.

error: Content is protected !!

Join the Group

Join WhatsApp Group