ಕಲ್ಲಡ್ಕ: ಮುಗಿಯದ ರಸ್ತೆ ಹೊಂಡದ ಸಂಕಟ ➤‌ ಪ್ರಯಾಣಿಕ ಬೆಳ್ಳಾರೆಯ ಯುವಕನ ಸೊಂಟ ಮುರಿತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 22. ಕಲ್ಲಡ್ಕದಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿ ಮತ್ತು ಮಳೆಯ ಕಾರಣದಿಂದ ಹೊಂಡ ಬಿದ್ದಿರುವ ಕಾರಣ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ಸೊಂದು ರಸ್ತೆ ಹೊಂಡಕ್ಕೆ ಬಿದ್ದು ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕನೋರ್ವನ ಸೊಂಟ ಮುರಿತಕ್ಕೊಳಗಾದ ಘಟನೆ ನಡೆದಿದೆ.

ಸೊಂಟ ಮುರಿತಕ್ಕೊಳಗಾದವರನ್ನು ಬೆಳ್ಳಾರೆಯ ತಡಗಜೆ ನಿವಾಸಿ ಸುಳ್ಯದ ಮೊಬೈಲ್ ಅಂಗಡಿಯಲ್ಲಿ ಉದ್ಯೋಗಿಯಾಗಿರುವ ವಿಜಯ ಕುಮಾರ್‌ ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಬಸ್ ಹೊಂಡಕ್ಕೆ ಬಿದ್ದಿದ್ದು, ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕ ಸೀಟಿನಿಂದ ಮೇಲಕ್ಕೆ ಎಸೆಯಲ್ಪಟ್ಟು ಬೀಳುವ ರಭಸಕ್ಕೆ ಬಸ್ಸಿನ ಸೀಟಿನ ರಾಡ್‌ ಸೊಂಟಕ್ಕೆ ಬಡಿದು ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ತಿಳಿಸಿದ್ದಾರೆ. ರಸ್ತೆ ಕಾಮಗಾರಿಯ ಸಮರ್ಪಕ ನಿರ್ವಹಣೆಯ ಕೊರತೆ ಮತ್ತು ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣವೆಂದು ಜನರಾಡಿಕೊಳ್ಳುತ್ತಿದ್ದು ಬಂಟ್ವಾಳ ಪೋಲಿಸರು ಬಸ್‌ ಚಾಲಕನ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ.

 

error: Content is protected !!

Join the Group

Join WhatsApp Group