(ನ್ಯೂಸ್ ಕಡಬ) newskadaba.com ಪುತ್ತೂರು, ಆ. 17. ಆರು ತಿಂಗಳ ಹಿಂದೆ ಬೆಳ್ಳಾರೆಯಲ್ಲಿ ಅಪಘಾತಗೊಂಡ ಹುಂಡೈ ಕಾರೊಂದನ್ನು ದುರಸ್ಥಿ ಮಾಡುವ ಸಂದರ್ಭ RCಯಲ್ಲಿ ಮತ್ತು ಇನ್ಶ್ಯೂರೆನ್ಸ್ನ ಮಾಲಕತ್ವದ ದಾಖಲೆ ಪತ್ರದಲ್ಲಿ ತೊಂದರೆ ಕಂಡು ಬಂದಿದ್ದರಿಂದ ಕಾರನ್ನು ರೋಟರಿಪುರದ ಪರಿಚಯಸ್ಥರ ಮನೆ ಸಮೀಪ ನಿಲ್ಲಿಸಿ ಹೋದ ಘಟನೆ ಬೆಳಕಿಗೆ ಬಂದಿದ್ದು ಮತ್ತು ಈ ಕುರಿತು ಸ್ಥಳೀಯರು ಅಪರಿಚಿತ ಕಾರೊಂದು ಪತ್ತೆಯಾದ ಹಿನ್ನೆಲೆ ಆತಂಕಗೊಂಡ ಘಟನೆ ನಡೆದಿದೆ.

ಬೆಳ್ಳಾರೆಯಲ್ಲಿ ಆರು ತಿಂಗಳ ಹಿಂದೆ ಮೋರಿಗೆ ಢಿಕ್ಕಿಯಾದ ಸವಣೂರಿನ ಮಿಥುನ್ ಎಂಬವರ ಮಾಲಕತ್ವದ ಹುಂಡೈ ಕಾರನ್ನು ಶೋರೂಮ್ ಒಂದರಲ್ಲಿ ದುರಸ್ಥಿಗೆ ಇಡಲಾಗಿತ್ತು. ಆದರೆ ಮಿಥುನ್ ಅವರು ಬೆಳ್ತಂಗಡಿಯ ಜಯಂತ್ ಎಂಬವರಿಂದ ಕಾರು ಖರೀದಿಸಿ ಆರ್.ಸಿ. ದಾಖಲೆ ಮಾತ್ರ ಬದಲಾಯಿಸಿದ್ದು, ಕಾರಿನ ಇನ್ಶ್ಯೂರೆನ್ಸ್ ಮಾತ್ರ ಹಿಂದಿನ ಕಾರಿನ ಮಾಲಕ ಜಯಂತ್ ಅವರ ಹೆಸರಿನಲ್ಲಿ ಇದ್ದುದರಿಂದ ಕಾರಿಗೆ ಅಪಘಾತದ ವಿಮೆ ಕೊಡಲಾಗುವುದಿಲ್ಲ ಎಂದು ಇನ್ಶ್ಯೂರನ್ಸ್ ಕಂಪೆನಿಯವರು ತಿಳಿಸಿದ್ದರು. ಇತ್ತ ಶೋರೂಮ್ನಲ್ಲಿ ಇರಿಸಿದರೆ ಕಾರಿಗೆ ದಿನಕ್ಕೆ 2,500ರೂ. ಬಾಡಿಗೆ ತೆರಬೇಕಾಗುವುದರಿಂದ ಮಿಥುನ್ ಅವರು ತನ್ನ ಪರಿಚಯಸ್ಥರಾದ ರೋಟರಿಪುರ ರಾಮ ಎಂಬವರ ಮನೆಯ ಸಮೀಪ ನಿಲ್ಲಿಸಿದ್ದರು. ಆದರೆ ಇತ್ತೀಚೆಗೆ ಸ್ಥಳೀಯ ಸಾರ್ವಜನಿಕರು ಅಪಘಾತಗೊಂಡ ಕಾರು ಇಲ್ಲಿ ನಿಲ್ಲಿಸಿರುವ ಕುರಿತು ಆತಂಕಿತರಾಗಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿ ಕಾರಿನ ಮಾಲಕರನ್ನು ಸಂಪರ್ಕಿಸಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಕಾರಿನ ಮಾಲಕ ಮಿಥುನ್ ಅವರು ಕಾರಿನ ಮೇಲೆ ಸಾಲವಿದೆ. ಸಾಲದ ಮೊತ್ತ ಪಾವತಿಸಿ ಕಾರನ್ನು ಅಲ್ಲಿಂದ ತೆರವು ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.










