ಬೆಳ್ತಂಗಡಿ: ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪ ➤ ಯುವಕರ ತಂಡದಿಂದ ಇಬ್ಬರ ಮೇಲೆ ಹಲ್ಲೆ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 23. ಬಾಲಕಿಯ ಮೇಲೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಎಂದು ಗುರುತಿಸಲಾಗಿದೆ. ಕಳೆದ ಹತ್ತು ದಿನಗಳ ಹಿಂದೆ ನಾರಾಯಣ ನಾಯ್ಕ್ (47) ಎಂಬವರು ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವಿಚಾರವಾಗಿ ಅದಾಗಲೇ ರಾಜಿ ಸಂದಾನ ನಡೆದಿತ್ತು. ಆದರೆ ಶುಕ್ರವಾರ ಸಂಜೆ ಮತ್ತೆ ಅದೇ ಬಾಲಕಿಯನ್ನು ಕರೆದು ಮಾತಾಡಿಸಿದ್ದ ಎಂದು ನಾರಾಯಾಣ ನಾಯ್ಕ್ ನನ್ನು ಯುವಕರ ತಂಡ ತಡೆದು ಹಲ್ಲೆಗೆ ಮುಂದಾಗಿದೆ. ಇದನ್ನು ನೋಡಿದ ಜಾರಪ್ಪ ನಾಯ್ಕ್ ಹಲ್ಲೆ ಬಿಡಿಸಲು ಬಂದಾಗ ಅವರ ಮೇಲೂ ಯುವಕರು ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಈ ವೇಳೆ ಜಾರಪ್ಪ ನಾಯ್ಕ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜಾರಪ್ಪ ನಾಯ್ಕ್ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!

Join the Group

Join WhatsApp Group