ಕುಡಿತದ ಮತ್ತಿನಲ್ಲಿ ಜಗಳ ನಡೆದು ಮಗನನ್ನೇ ಕೊಂದ ತಂದೆ…! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 24. ವ್ಯಕ್ತಿಯೋರ್ವರು ಮದ್ಯದ ಅಮಲಿನಲ್ಲಿ ತನ್ನ ಮಗನನ್ನೇ ಹೊಡೆದು ಕೊಲೆಗೈದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ಬುಧವಾರದಂದು ರಾತ್ರಿ ನಡೆದಿದೆ.


ಕೊಲೆಯಾದವರನ್ನು ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಆರೋಪಿ ತಂದೆ ವಸಂತ ಗೌಡ ಎಂದು ತಿಳಿದುಬಂದಿದೆ. ವಿವಾಹಿತರಾಗಿದ್ದ ದಿನೇಶ್, ಕೌಟುಂಬಿಕ ಕಲಹದಿಂದಾಗಿ ಕೆಲ ವರ್ಷಗಳ ಹಿಂದೆಯೇ ಪತ್ನಿಯನ್ನು ತೊರೆದು, ಕಾಂತಮೂಲೆಯ ಮನೆಯಲ್ಲಿ ತಂದೆ ಹಾಗೂ ಮಗ ವಾಸವಾಗಿದ್ದರು. ಇವರಿಬ್ಬರ ನಡುವೆ ಆಗಾಗ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಬುಧವಾರದಂದು ಕೂಡಾ ತಂದೆ- ಮಗನ ನಡುವೆ ಜಗಳ ನಡೆದು, ಅದು ತಾರಕಕ್ಕೇರಿ ಮನೆಯಲ್ಲಿದ್ದ ಮರದ ತುಂಡಿನಿಂದ ವಸಂತ ಗೌಡರು ಮಗ ದಿನೇಶ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ರಕ್ತ ಸ್ರಾವವಾಗಿ ದಿನೇಶ್ ಅವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಆರೋಪಿ ವಸಂತ ಗೌಡರನ್ನು ಬಂಧಿಸಿದ್ದು, ಬುಧವಾರದಂದು ರಾತ್ರಿ ನಮ್ಮಿಬ್ಬರ ನಡುವೆ ಕಲಹ ನಡೆದಿರುವುದಾಗಿ ಆರೋಪಿ ವಸಂತ ಗೌಡರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Scroll to Top