ಸಗಣಿ ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com ಕುಂದಾಪುರ, ಜ. 05. ಮಗುವೊಂದು ಸಗಣಿ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ಕುಂದಾಪುರದ ಮೊಳಹಳ್ಳಿ ಎಂಬಲ್ಲಿ ನಡೆದಿದೆ.

ಮೃತ ಮಗುವನ್ನು ಬಿಹಾರ ಮೂಲದ ರಾಮ್ ದೇಹನ್ ಸಿಂಗ್ ಇವರ ಪುತ್ರ ಅನುರಾಜ್ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ದಂಪತಿ ಕುಂದಾಪುರದ ಮೊಳಹಳ್ಳಿಯ ಕೈಲ್ಕೇರಿ ನಿವಾಸಿ ಚೈತ್ರ ಅಡಪ ಎಂಬವರ ಮನೆಯ ಪಕ್ಕದಲ್ಲಿ ವಾಸವಾಗಿದ್ದರು. ಈ ಅಡಪ ಅವರ ಬಳಿ ಸುಮಾರು 30 ದನಗಳಿದ್ದು, ಮೃತ ಮಗುವಿನ ತಾಯಿ ದಿನನಿತ್ಯ ದನದ ಹಟ್ಟಿ ಸ್ವಚ್ಚಗೊಳಿಸಿ, ಹಟ್ಟಿಯ ನೀರು ಅಲ್ಲೇ ಇದ್ದ ಹೊಂಡದಲ್ಲಿ ತುಂಬುತ್ತಿದ್ದರು. ಘಟನೆ ನಡೆದ ದಿನ ಸಂಜೆ 4:45ಕ್ಕೆ ಕೆಲಸ ಮುಗಿಸಿ ಮನೆಗೆ ತೆರಳಿದ ತಾಯಿ ಲಾಲ್ ಬಿಹಾರಿ ಮೂರು ಮಕ್ಕಳ ಜೊತೆ ಸಂಜೆಯ ಚಹಾ ಸೇವಿಸಿದ್ದಾರೆ. ಆದರೆ ೫ ಗಂಟೆಯ ವೇಳೆಗೆ ಮಗ ಅನುರಾಜ್ ಕಾಣಿಸದೇ ಇದ್ದು, ಹುಡುಕಾಡಿದಾಗ ಮಗುವಿನ ಚಪ್ಪಲಿ ಸಗಣಿ ಹೊಂಡದ ಬಳಿ ಇದ್ದುದರಿಂದ ಸಂಶಯಗೊಂಡು ಹೊಂಡಕ್ಕೆ ಇಳಿದು ಹುಡುಕಾಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಕ್ಷಣವೇ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪರೀಕ್ಷಿಸಿದ ಡಾಕ್ಟರ್ ಮಗು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Scroll to Top