(ನ್ಯೂಸ್ ಕಡಬ) newskadaba.com ಕಡಬ, ಜು.16: ಇಂಧನ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕರ್ನಾಟಕ ಸ್ಟೇಟ್ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಕಡಬ ಸೆಕ್ಟರ್ ವತಿಯಿಂದ ಕಡಬ ತಾಲೂಕು ಕಛೇರಿ ಎದುರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸ್ಎಸ್ಎಫ್ ಉಪ್ಪಿನಂಗಡಿ ವಿಭಾಗೀಯ ವಕ್ತಾರ ಉಮ್ಮರ್ ಮುಸ್ಲಿಯಾರ್ ನೀರಕಟ್ಟೆ ಮಾತನಾಡಿ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರ ಸರಕಾರವು ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಅಚ್ಚೇ ದಿನ್ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದವರು ದೇಶದ ಜನರನ್ನು ನರಕಕ್ಕೆ ತಳ್ಳುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇತ್ತೀಚೆಗೆ ಮನಬಂದಂತೆ ಏರಿಕೆ ಮಾಡಿ ಜನರಿಗೆ ಅನ್ಯಾಯ ಮಾಡುತ್ತಿದೆ. ಪದೇ ಪದೇ ಹಿಂದಿನ ಯುಪಿಎ ಸರಕಾರ ಮಾಡಿದ ಸಾಲವನ್ನು ತೀರಿಸಿದ್ದೇವೆ ಎಂದು ಸಬೂಬು ನೀಡುತ್ತಿದ್ದಾರೆ. ಕೇಂದ್ರ ಸರಕಾರ ಇಂಧನ ಕಚ್ಚಾ ತೈಲಕ್ಕೆ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಇವರಿಗೆ ಇಚ್ಚಾ ಶಕ್ತಿ ಇಲ್ಲ. ಇವರು ಬೆಲೆ ಏರಿಕೆ ಮಾಡಿ ದುಡ್ಡು ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿರುವುದರಿಂದ ದೇಶದ ಬಡವರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟುವಂತಾಗಿದೆ. ದೇಶದ ಜನ ಇವರಿಗೆ ಮುಂದೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದ ಉಮ್ಮರ್ ಮುಸ್ಲಿಯಾರ್ ತಕ್ಷಣ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು. ತಪ್ಪಿದ್ದಲ್ಲಿ ಮುಂದೆ ದೇಶ ವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಪ್ಪಿನಂಗಡಿ ವಿಭಾಗೀಯ ಅಧ್ಯಕ್ಷ ಎಫ್.ಎಚ್. ಮಹಮ್ಮದ್ ಮಿಸ್ಬಾಹಿ, ಪ್ರಧಾನ ಕಾರ್ಯದರ್ಶಿ ಶರೀಫ್ ಕಲ್ಲಾಜೆ, ಪ್ರಮುಖರಾದ ಹಕೀಂ ಮದನಿ, ಇಲ್ಯಾಸ್ ಮದನಿ, ಇಬ್ರಾಹಿಂ ಮುಸ್ಲಿಯಾರ್, ಅಬ್ಬಾಸ್ ಮರ್ಧಾಳ, ಫೈಝಲ್ ಕಡಬ, ನವಾಝ್, ರಝಾಕ್ ಬಾಖವಿ, ಹಮೀದ್ ಮಿತ್ತೋಡಿ ಮತ್ತಿತರರು ಭಾಗವಹಿಸಿದ್ದರು. ಕರ್ನಾಟಕ ಮುಸ್ಲಿಮ್ ಜಮಾತ್ ಕಡಬ ತಾಲೂಕು ಅಧ್ಯಕ್ಷ ಮೀರಾನ್ ಹಾಜಿ ಪ್ರಸ್ತಾವನೆಗೈದರು.
ರಿಯಾಝ್ ಮುಸ್ಲಿಯಾರ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಅಧ್ಯಕ್ಷ ಝಿಯಾರ್ ಕೋಡಿಂಬಾಳ ವಂದಿಸಿದರು. ಬಳಿಕ ಕಡಬ ತಹಶಿಲ್ದಾರ್ ಮುಖಾಂತರ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸುವಂತೆ ಮನವಿ ಮಾಡಲಾಯಿತು.









