ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ.!

(ನ್ಯೂಸ್ ಕಡಬ) newskadaba.com ಮಂಗಳೂರು, ಆ,18:   ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿ ಸರ್ಕಾರ ಹೊರಡಿಸಿರುವ ನೂತನ ಮಾರ್ಗಸೂಚಿಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ. ಆದರೆ, ಸ್ಥಳೀಯ ಪೊಲೀಸರ ಅನುಮತಿಯೊಂದಿಗೆ ಸಭಾಂಗಣಗಳಲ್ಲಿ ಒಂದು ದಿನದ ಸರಳ ಆಚರಣೆಗೆ ಹೆಚ್ಚಿನ ಸಮಿತಿಗಳು ಸಿದ್ಧತೆ ನಡೆಸಿವೆ. ಜಿಲ್ಲೆಯ ವಿವಿಧೆಡೆ ಸಣ್ಣ, ದೊಡ್ಡ ಮೈದಾನಗಳಲ್ಲಿ ಮೂರರಿಂದ ಐದು ದಿನಗಳ ಸಾರ್ವಜನಿಕ ಆಚರಣೆಗಳು ವಿಜ್ರಂಭಣೆಯಿಂದ ಜರುಗುತಿದ್ದವು. ಸರ್ಕಾರದ ಮಾರ್ಗಸೂಚಿ ಪ್ರಕಾರ, ರಸ್ತೆ ಬದಿ, ಮೈದಾನಗಳಲ್ಲಿ ಪೆಂಡಾಲ್ ಹಾಕಿ ಆಚರಣೆ ಮಾಡುವಂತಿಲ್ಲ. ಆದ್ದರಿಂದ ಜಿಲ್ಲೆಯ ವಿವಿಧಡೆ ಮೈದಾನಗಳಲ್ಲಿ ನಡೆಯುತ್ತಿದ್ದ ಆಚರಣೆಗಳು, ದೇವಳಗಳ ಸಭಾಂಗಣಕ್ಕೆ ಸ್ಥಳಾಂತರಗೊಂಡಿದ್ದು, ಸಮಿತಿಯವರೇ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ.

 

ಬೆಳಗ್ಗೆ ಮೂರ್ತಿ ಪ್ರತಿಷ್ಠಾಪಿಸಿ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ ಸಾಯಂಕಾಲ ವಿಸರ್ಜನಾ ಪೂಜೆ ಮಾಡಿ, 6 ಗಂಟೆಯೊಳಗೆ ಸಭಾಂಗಣದ ಪಕ್ಕದ ಕೆರೆ, ಬಾವಿಗಳಲ್ಲಿ ಜಲಸ್ತಂಭನ ಮಾಡಲು ಸಮಿತಿಗಳು ತೀರ್ಮಾನ ತೆಗೆದುಕೊಂಡಿದೆ. ಜತೆಗೆ ಮೂರ್ತಿಗಳ ಎತ್ತರವನ್ನೂ ಈ ಬಾರಿ ಕಡಿಮೆ ಮಾಡಲಾಗಿದ್ದು, ವಿಸರ್ಜನಾ ಮೆರವಣಿಗೆ ಇಲ್ಲ.ಸರ್ಕಾರದ ಮಾರ್ಗಸೂಚಿ ಪ್ರಕಾರ ರಸ್ತೆ, ಮೈದಾನಗಳಲ್ಲಿ ಪೆಂಡಾಲ್ ಹಾಕಿ ಗಣೇಣೋಶ್ಸವ ಮಾಡುವಂತಿಲ್ಲ. ಜಿಲ್ಲಾಡಳಿತವೂ ಅನುಮತಿ ಕೊಡುವುದಿಲ್ಲ. ಆದರೆ ಸಾರ್ವಜನಿಕರಿಗೆ ಪ್ರವೇಶ ನೀಡದೆ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ತಡೆಯುವುದಿಲ್ಲ. ದೇವಸ್ಥಾನಗಳ ಸಭಾಂಗಣಗಳಲ್ಲಿ ಆಚರಣೆಗೆ ಸರ್ಕಾರ ಅವಕಾಶ ನೀಡಿದೆ ಎಂದು ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ  ತಿಳಿಸಿದ್ದಾರೆ.

 

 

error: Content is protected !!

Join the Group

Join WhatsApp Group