(ನ್ಯೂಸ್ ಕಡಬ) newskadaba.com ಕಡಬ, ಎ.22. ಕಡಬದಿಂದ ಮಂಗಳೂರಿಗೆ ಕೆಲಸಕ್ಕೆಂದು ಆಗಮಿಸಿದ್ದ ನರ್ಸ್ ಓರ್ವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿದ ಘಟನೆ ಬೆಳಕಿಗೆ ಬಂದಿದೆ.

ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿಯಾಗಿರುವ ಲಿನೇಶ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡಿಕೊಂಡಿದ್ದರು. ರಜೆಯ ಹಿನ್ನೆಲೆಯಲ್ಲಿ ಕಡಬದ ನೂಜಿಬಾಳ್ತಿಲ ಗ್ರಾಮದ ತನ್ನ ಮನೆಯಲ್ಲಿದ್ದ ಲಿನೇಶ್ ರನ್ನು ತುರ್ತಾಗಿ ಕೆಲಸಕ್ಕೆ ಹಾಜರಾಗುವಂತೆ ಆಸ್ಪತ್ರೆಯಿಂದ ಕರೆ ಮಾಡಲಾಗಿದೆ. ಅದರಂತೆ ಗರ್ಭಿಣಿಯಾಗಿರುವ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಮಗುವಿನೊಂದಿಗೆ ಕಡಬದಿಂದ ಮಂಗಳೂರಿಗೆ ತನ್ನ ಸ್ವಂತ ವಾಹನದಲ್ಲೇ ಮಂಗಳೂರಿಗೆ ತೆರಳಿದ್ದು, ಮಂಗಳೂರಿಗೆ ತಲುಪಿದ ಇವರಿಗೆ ದೊಡ್ಡ ಕಂಟಕ ಎದುರಾಗಿದೆ. ಮಂಗಳೂರಿನ ರೂಂಗೆ ತಲುಪಿದ ನಂತರದಲ್ಲಿ ಏಕಾಏಕಿ ಇವರಿಗೆ ಕರೆ ಮಾಡಿದ ಆಸ್ಪತ್ರೆಯ ಆಡಳಿತ ಮಂಡಳಿ ನೀವು ಕಡಬದಿಂದ ಬಂದಿರುವುದರಿಂದ ಕೂಡಲೇ ಹೊಂ ಕ್ವಾರಂಟೈನ್ ನಲ್ಲಿ ಇರಬೇಕೆಂದು ಸೂಚಿಸಿದೆ. ಮಾತ್ರವಲ್ಲದೆ ಇವರೊಂದಿಗೆ ಯಾರೊಬ್ಬರೂ ಬೆರೆಯಬಾರದೆಂದು ಆಸ್ಪತ್ರೆಯಲ್ಲಿನ ಉಳಿದ ಸಿಬ್ಬಂದಿಗಳಿಗೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇವರ ಮನೆಗೆ ಭೇಟಿ ನೀಡಿದ ಪೋಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಇವರ ಮನೆ ಬಾಗಿಲಿಗೆ ಕ್ವಾರೆಂಟೇನ್ ಭಿತ್ತಿಪತ್ರ ಅಂಟಿಸಿ ಹೋಗಿದ್ದಾರೆ. ಯಾವುದೇ ಕೊರೋನಾ ಪ್ರಕರಣಗಳು ಇಲ್ಲದ ಸುರಕ್ಷಿತ ಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬವನ್ನು ರೆಡ್ ಝೋನ್ ಮಾಡಿ ಮನೆಯಲ್ಲಿ ಆರಾಮವಾಗಿದ್ದವರನ್ನು ಕರೆಸಿ ಹೊಂ ಕ್ವಾರಂಟೈನ್ ಮಾಡಿರೋದು ಈ ಕುಟುಂಬನ್ನು ಸಂಕಷ್ಟಕೀಡು ಮಾಡಿದೆ.

ತನ್ನ ಗರ್ಭಿಣಿ ಪತ್ನಿಯ ಚಿಕಿತ್ಸೆ ಸೇರಿದಂತೆ ತನ್ನ ಪುಟ್ಟ ಮಗುವಿನ ಸ್ಥಿತಿ ನೆನೆದು ಲಿನೇಶ್ ಅವರು ಆತಂಕಕ್ಕೆ ಈಡಾಗಿದ್ದಾರೆ. ಯಾವ ಕಾರಣದಿಂದಾಗಿ ತಮ್ಮನ್ನು ಏಕಾಏಕಿ ಹೊಂ ಕ್ವಾರೆಂಟೇನ್ ಮಾಡಲಾಗಿದೆ ಎಂಬುದು ಮಾತ್ರ ಇನ್ನೂ ಇವರಿಗೆ ತಿಳಿದಿಲ್ಲ. ಆಸ್ಪತ್ರೆಯವರ ಈ ನಡೆಯ ಬಗ್ಗೆ ಸಾರ್ವಜನಿಕರೂ ಪ್ರಶ್ನಿಸುವಂತಾಗಿದೆ. ಒಟ್ಟಿನಲ್ಲಿ ಈ ಕುಟುಂಬದ ನೆರವಿಗೆ ಸಂಬಂಧಿಸಿದ ಅಧಿಕಾರಿಗಳು ಗಮನ ನೀಡುವುದರ ಜೊತೆಗೆ ಯಾರು ಈ ಕುಟುಂಬಕ್ಕೆ ಇಂತಹ ಸಂಕಷ್ಟ ತಂದೊಡ್ಡಿದ್ದಾರೆ ಮತ್ತು ಕಡಬದಂತಹ ಸುರಕ್ಷಿತ ಪ್ರದೇಶವನ್ನು ಅಧಿಕಾರಿಗಳಿಗೆ ತಿಳಿಯದಂತೆ ರೆಡ್ ಝೋನ್ ಆಗಿ ಮಾರ್ಪಾಡು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯೂ ನಡೆಯಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.













