ಬಿಳಿನೆಲೆ: ಸಾಮೂಹಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭೆ ➤ವೇದ, ಸಂಸ್ಕೃತವನ್ನು ವಿದೇಶಗಳಲ್ಲೂ ಕಲಿಸಲಾಗುತ್ತಿದೆ – ಮುನಿಯಂಗಳ

(ನ್ಯೂಸ್ ಕಡಬ) newskadaba.com, ಸುಬ್ರಹ್ಮಣ್ಯ, ಜ.7  ಪುತ್ತೂರು ಶ್ರೀ.ಕ್ರೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್, ಬಿಳಿನೆಲೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಬಿಳಿನೆಲೆ ವಲಯ ಜನಜಾಗೃತಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಕಲ್ಫೋಕ್ತ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಶನಿವಾರ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಸಂಜೆ ಗಂಟೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾದ ವೆಂಕಟೇಶ್ ಭಟ್ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ನಡೆಸಲಾಯಿತು. ಪೂಜೆಯಲ್ಲಿ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣವನ್ನು ವಾಸ್ತುಶಿಲ್ಪಿ ಶಾಸ್ತ್ರಜ್ಞರಾದ ಎಸ್.ಎಂ. ಪ್ರಸಾದ್ ಮುನಿಯಂಗಳ ನೆರವೇರಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ವೀರೇಂದ್ರ ಹೆಗ್ಗಡೆಯವರಿಂದ ಇಂದು ಅನೇಕ ಧರ್ಮ ಜಾಗೃತಿ ಕಾರ್ಯಕ್ರಮಗಳ ಜೊತೆಗೆ, ಗ್ರಾಮಾಭಿವೃದ್ಧಿ ಪೂರಕ ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ. ಇಂದಿನ ಆಧುನಿಕ ಕಾಲದಲ್ಲಿ ಭಾರತದ ವೇದಗಳು, ಸಂಸ್ಕೃತ ಭಾಷೆ ಜರ್ಮನಿಯಂತಹ ದೇಶಗಳಲ್ಲಿ ಕಲಿಕೆಯ ವಿಷಯಗಳಾಗಿವೆ. ನಮ್ಮಲ್ಲಿ ಇನ್ನೂ ಅದನ್ನು ಅನುಷ್ಠಾನಕ್ಕೆ ಮುಂದಾಗಿಲ್ಲ. ವೇದ, ಸಂಸ್ಕೃತದ ಸಾರವನ್ನು ವಿದೇಶಗಳು ಅರಿತು ಅವರು ಅದರ ಪ್ರಯೋಜನ ಪಡೆಯುತ್ತಿದ್ದರೂ ನಮ್ಮಲ್ಲಿ ಇನ್ನೂ ಧರ್ಮ ಜಾಗೃತಿಗೊಳ್ಳಬೇಕಿದೆ ಎಂದ ಅವರು ಜ್ಯೋತಿಷ್ಯ ಶಾಸ್ತ್ರ ಗ್ರಹಗಳ ಚಲನೆಯಲ್ಲಿ ತಿಳಿಯುವಂತಹದ್ದು ಎಂದರು. ಪುತ್ತೂರು ಶ್ರೀ.ಕ್ಷೇ.ಗ್ರಾ.ಯೋ.ಯೋಜನಾಧಿಕಾರಿ ಜನಾರ್ದನ ಎಸ್. ಮಾತನಾಡಿ, ಯೋಜನೆಯಿಂದ ವಿವಿಧ ಜನಪರ ಕೆಲಗಳನ್ನು ಮಾಡಲಾಗುತ್ತಿದೆ. ಧರ್ಮದೊಂದಿಗೆ ಪ್ರಗತಿ, ದೇವರಲ್ಲಿ ನಂಬಿಕೆ ಇಟ್ಟು ಮುಂದುವರಿದಾಗ ನಮ್ಮ ಬೆಳವಣಿಗೆ ಸಾಧ್ಯ ಎಂದರು. ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಪಿ.ಎಂ.ಕೇಶವ ಗೌಡ ಪುತ್ತಿಲ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ತಮ್ಮಯ್ಯ ಗೌಡ, ಶ್ರೀ ಗೋಪಾಲಕೃಷ್ಣ ದೇವಳದ ಆಡಳಿತಾಧಿಕಾರಿ, ಕಡಬ ಉಪತಹಶೀಲ್ದಾರ್ ನವ್ಯ, ಬಿಳಿನೆಲೆ ಶ್ರೀ.ಗೋಪಾಲಕೃಷ್ಣ ಶಾಲಾ ಮುಖ್ಯಗುರು ದೀರಣ್ಣ ಗೌಡ ಅಮೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧಾರ್ಮಿಕ ಭಾಷಣ ಮಾಡಿದ ವಾಸ್ತುಶಿಲ್ಪಿ ಶಾಸ್ತ್ರಜ್ಞರಾದ ಎಸ್.ಎಂ. ಪ್ರಸಾದ್ ಮುನಿಯಂಗಳ ಹಾಗೂ ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯವರನ್ನು ತಮ್ಮಯ್ಯ ಗೌಡ ಅವರು ಗೌರವಿಸಿದರು. ಒಕ್ಕೂಟದ ಬಿಳಿನೆಲೆ ವಲಯಾಧ್ಯಕ್ಷ ಸತೀಶ್ ಎರ್ಕ ಸ್ವಾಗತಿಸಿ, ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ ವಂದಿಸಿದರು. ಕಡಬ ಮೇಲ್ವಿಚಾರಕ ಬಾಬು ಕಾರ್ಯಕ್ರಮ ನಿರೂಪಿಸಿದರು. ಬಿಳಿನೆಲೆ ವಲಯ ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು, ಸೇವಾಪ್ರತಿನಿಧಿಗಳು ಸಹಕರಿಸಿರದರು.

error: Content is protected !!

Join the Group

Join WhatsApp Group