ರೆಡ್ ಕ್ರಾಸ್ ಸಮಿತಿ➤ವಿಶೇಷ ಉಪನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17.  ಸೇವೆ ಮಾಡಲು ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಸೇವೆಯಲ್ಲಿ ಸಿಗುವ ತೃಪ್ತಿಯನ್ನು ಬೇರೆ ಯಾವುದರಿಂದಲೂ ಪಡೆಯಲು ಸಾಧ್ಯವಿಲ್ಲ, ಇದು ರೆಡ್‍ಕ್ರಾಸ್‍ನಿಂದ ದೊರೆಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ರೆಡ್‍ಕ್ರಾಸ್ ಸಮಿತಿಯ ಅಧ್ಯಕ್ಷ ಸಚೇತ್ ಸುವರ್ಣ ಹೇಳಿದರು.


ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚೆಗೆ ಯುವ ರೆಡ್‍ಕ್ರಾಸ್ ಸಂಘ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ರೆಡ್‍ಕ್ರಾಸ್‍ನಲ್ಲಿ ಮೊತ್ತಮೊದಲಿಗೆ ಮಾನವೀಯತೆ ಮತ್ತು ಮಾನವ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂದರು. ಅಲ್ಲದೇ ರೆಡ್‍ಕ್ರಾಸ್ ಉಗಮ ಅದರ ವಿಶೇಷತೆ, ವ್ಯಾಪ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಮೀನಾ ಎಸ್ ಕಜಂಪಾಡಿ, ಸಮಾಜ ಸೇವೆ ಮಾಡುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಸಂಘದ ಉಪಾಧ್ಯಕ್ಷೆ ಡಾ. ಕೆ.ಎ. ನಾಗರತ್ನ, ಕಾರ್ಯದರ್ಶಿ ಶ್ರುತಿ, ಸಹಕಾರ್ಯದರ್ಶಿ ಮನೀಷಾ ಉಪಸ್ಥಿತರಿದ್ದರು.

Scroll to Top