ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ ಪ್ರೋತ್ಸಾಹಧನಕ್ಕೆ ➤ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27.ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ ವಿಶೇಷವಾಗಿ ಕೆಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಮತ್ತು ಕೃಷಿ ಉತ್ಪನ್ನಗಳು ಪೋಲಾಗುವುದನ್ನು ತಡೆಯಲು ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. CFTRI/ IIMR /ICRISAT /NIFTEM/ DFRL ಸಂಸ್ಥೆಗಳ ತಂತ್ರಜ್ಞಾನ ಅಳವಡಿಸಿ ತಯಾರಿಸಲಾದ ಯಂತ್ರೋಪಕರಣಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.

ಈ ಕಾರ್ಯಕ್ರಮದಡಿ ಅರ್ಹ ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು (FPOs), ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನಿಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಪ್ರೋತ್ಸಾಹಧನಕ್ಕೆ ಅರ್ಹರಾಗಿರುತ್ತಾರೆ. ನವೋದ್ಯಮಿಗಳಿಗೆ ಹಾಗೂ ನೂತನವಾಗಿ ಆರಂಭಿಸಲಿರುವ ಉದ್ದಿಮೆಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಸಾವಯವ ಮತ್ತು ಶೂನ್ಯ ಬಂಡವಾಳ ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಯೋಜನೆಯ ಪ್ರಸ್ತಾವನೆಯ ಒಟ್ಟು ವೆಚ್ಚದ ಮೇಲೆ ಪ್ರೋತ್ಸಾಹಧನವಾಗಿ ಎಲ್ಲಾ ವರ್ಗದವರು ಶೇ.50ರಷ್ಟು ಅಥವಾ ಗರಿಷ್ಠ ರೂ. 10 ಲಕ್ಷಗಳವರೆಗೆ ಪಡೆಯಬಹುದಾಗಿರುತ್ತದೆ. ಯೋಜನಾ ಪ್ರಸ್ತಾವನೆಯ ಒಟ್ಟು ಮೊತ್ತವು ರೂ. 5.0 ಲಕ್ಷಗಳಿಗಿಂತ ಹೆಚ್ಚಾಗಿದ್ದಲ್ಲಿ ನೆರವು ಕೋರುವ ಅರ್ಜಿದಾರರು ಘಟಕ ಸ್ಥಾಪನೆ /ಉನ್ನತೀಕರಣ/ಆಧುನೀಕರಣ ಉದ್ದೇಶಕ್ಕಾಗಿ ಯಾವುದಾದರೂ ರಾಷ್ಟ್ರೀಕೃತ/ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ ಕಡ್ಡಾಯವಾಗಿ ಸಾಲ ಪಡೆದಿರಬೇಕು. ಹೆಚ್ಚಿನ ವಿವರಗಳಿಗೆ ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group