(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.13.ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಅನೇಕ ನಷ್ಟಗಳು ಉಂಟಾಗಿದ್ದು, ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗುಜರಾತ್ ಸೇರಿದಂತೆ ದೇಶದ ಹಲವೆಡೆ ಮಳೆ, ಪ್ರವಾಹ ಇನ್ನೂ ಮುಂದುವರೆದಿದೆ. ಸಂಭವಿಸಿದ ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಭಾರತದಲ್ಲಿ ಈ ಸಮಯಕ್ಕೆ ಮೃತಪಟ್ಟವರ ಸಂಖ್ಯೆ 200ಕ್ಕೇರಿದೆ. ಸುಮಾರು 200 ಮಂದಿ ಮೃತರಾಗಿದ್ದು, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಿಂದ ಭೂ ಕುಸಿತ ಉಂಟಾಗಿ 9 ಮಂದಿ ಮೃತರಾಗಿದ್ದಾರೆ. ಪಶ್ಚಿಮ ಬಂಗಾಲ ಹಾಗೂ ಒಡಿಶಾದಲ್ಲಿ ಮಳೆಯಿಂದ 5 ಮಂದಿ ಮೃತರಾಗಿದ್ದಾರೆ.

ಕೇರಳದಲ್ಲಿ ಸಾವಿನ ಸಂಖ್ಯೆ 83ಕ್ಕೇರಿದ್ದು, ಮಲಪ್ಪುರಂನಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಳೆ ಅಬ್ಬರಕ್ಕೆ ಕರ್ನಾಟಕ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಒಟ್ಟಾರೆ 116 ಮಂದಿ ಸಾವನ್ನಪ್ಪಿದ್ದಾರೆ.ಕಚ್ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 120ಕ್ಕೂ ಏರ್ ಲಿಫ್ಟ್ ಮಾಡಿದ್ದು, ಕರ್ನಾಟಕದ ಕೊಪ್ಪಳ ಜಿಲ್ಲೆಯ ವಿರುಪಾಪುರ ಗುಡ್ಡೆಯಿಂದ 301 ಮಂದಿ ರಕ್ಷಣೆ, ಚಿಕ್ಕಮಗಳೂರಿನ ಹೊರಟ್ಟಿ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಸಿಲುಕಿದ್ದ 76 ಮಂದಿ ರಕ್ಷಣೆ ಪ್ರಮುಖವಾದ ಕಾರ್ಯಾಚರಣೆಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನೆ, ನೌಕಾಪಡೆ, ವಾಯುಸೇನೆ, ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರ ನೆರವಿನಿಂದ ಹಲವು ಜೀವಗಳನ್ನು ರಕ್ಷಿಸಲಾಗಿದೆ.













