ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಿರ್ಧರಿಸಿದೆ ಕರ್ನಾಟಕ

(ನ್ಯೂಸ್ ಕಡಬ) newskadaba.com ಮೈಸೂರು, ಆಗಸ್ಟ್.13.ಕಳೆದ ಎರಡು ತಿಂಗಳು ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕೊಳ್ಳ, ಈಗ ಮಳೆಯಿಂದ ತುಂಬಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿನ ಕಾವೇರಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ನೀರಿನಲ್ಲಿ ಕೊಚ್ಚಿ ಹೋಗಲಿದೆ.

ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಕಳೆದ ಸಭೆಯಲ್ಲಿ ನೆಮ್ಮದಿಯ ಸುದ್ದಿ ಕೊಟ್ಟಿತ್ತು. ಆದರೆ, ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಯಾವುದೆ ಬದಲಾವಣೆಯಾಗಿರಲಿಲ್ಲ. ನಂತರ ನಡೆದ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಕಾವೇರಿ ಕಣಿವೆ ರಾಜ್ಯಗಳ ಪ್ರತಿನಿಧಿಗಳು ಲಭ್ಯ ನೀರಿನ ಪ್ರಮಾಣ, ಮಳೆ ಮುನ್ಸೂಚನೆ, ಬರ ಪರಿಸ್ಥಿತಿ, ಜಲ ನಿರ್ವಹಣೆ, ನೀರು ಹಂಚಿಕೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿದ್ದರು.

ಜಲಾಶಯಕ್ಕೆ ಒಳ ಹರಿವು ಅಧಿಕವಾದರೆ ತಮಿಳುನಾಡಿಗೆ ನಿಗದಿಯಂತೆ ನೀರು ಹರಿಸಬೇಕು, ತಕ್ಷಣವೇ ನೀರು ಬಿಡುವ ಒತ್ತಡ ಹೇರಿಲ್ಲದ ಕಾರಣ, ರಾಜ್ಯಕ್ಕೆ ಆತಂಕ ದೂರವಾಗಿತ್ತು. ಈಗ ಮಳೆ ಬಂದಿದೆ, ಅಣೆಕಟ್ಟು ತುಂಬಿದೆ, ಕಬಿನಿ, ಕೆಆರ್ ಎಸ್ ನಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ. ಬಿಳಿಗುಂಡ್ಲು, ಎಚ್ ಡಿ ಕೋಟೆ, ಹೋಗೇನೆಕಲ್ ಮೂಲಕ ಕಾವೇರಿ ತಮಿಳುನಾಡುಸೇರುತ್ತಿದ್ದಾಳೆ. ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕೊಳ್ಳ, ತುಂಬಿ ಹರಿಯುತಿದ್ದು,ತಮಿಳುನಾಡಿಗೆ ಕಾವೇರಿ ನೀರು ಹರಿಸಲು  ಕರ್ನಾಟಕವು ನಿರ್ಧರಿಸಿದೆ.

 

error: Content is protected !!

Join the Group

Join WhatsApp Group