(ನ್ಯೂಸ್ ಕಡಬ) newskadaba.com, ಸೆ. 11.ಸವಣೂರು :ಶ್ರೀಕೃಷ್ಣನ ಜೀವನವು ಕೇವಲ ಪುರಾಣ ಕಥೆಯಲ್ಲ, ಅದು ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶನ ನೀಡುವ ಆದರ್ಶ ಜೀವನ ಸಂದೇಶವಾಗಿದೆ ಎಂದು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ. ಅವರು ಹೇಳಿದರು.
ಪಾಲ್ತಾಡು ವಿಷ್ಣುನಗರ ಶ್ರೀ ವಿಷ್ಣು ಮಿತ್ರವೃಂದದ ವತಿಯಿಂದ ಅಷ್ಟಮಿ ಮೈದಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ 15ನೇ ವರ್ಷದ ಮೊಸರುಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಶ್ರೀಕೃಷ್ಣನು ಬಾಲ್ಯದಲ್ಲೇ ತೋರಿದ ಧೈರ್ಯ, ಸತ್ಯಕ್ಕಾಗಿ ನಿಂತ ನಿಲುವು, ಗೀತೆಯ ಮೂಲಕ ನೀಡಿದ ಕರ್ಮಯೋಗದ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. “ಕೆಲಸ ಮಾಡುವುದು ನಮ್ಮ ಕರ್ತವ್ಯ, ಫಲವನ್ನು ನಿರೀಕ್ಷಿಸಬಾರದು ಎಂಬ ಗೀತೆಯ ಸಾರವನ್ನು ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬ ಮತ್ತು ಸಮಾಜ ಎರಡೂ ಸದೃಢವಾಗುತ್ತದೆ” ಎಂದರು.

ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಸಿಇಓ ಡಿ.ವಿಜಯ ರೈ ನೆಲ್ಯಾಜೆ ಮಾತನಾಡಿ, ಯುವಕರು ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಸೇರಿಕೊಂಡು ಸಂಘಟಿತರಾಗುವ ಮೂಲಕ ಸಮಾಜಕ್ಕೆ ಕೊಡುಗೆಯಾಗಬೇಕು ಎಂದರು.ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಮಾತನಾಡಿ, ಸಂಘಟನೆಗಳು ಸಮಾಜದ ಆಶೋತ್ತರಗಳಿಗೆ ಸ್ಪಂದಿಸಬೇಕು.ಸಂಘಟನೆಗಳ ಮೂಲಕ ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಸಾಧ್ಯ.ಮಕ್ಕಳಿಗೆ ಎಳವೆಯಲ್ಲೇ ಸಂಸ್ಕಾರ,ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿಸುವ ಕೆಲಸಮಾಡಬೇಕು.ಈ ನಿಟ್ಟಿನಲ್ಲಿ ಮಕ್ಕಳನ್ನು ಧಾರ್ಮಿಕ ಶಿಕ್ಷಣ ತರಗತಿಗಳಿಗೆ ಸೇರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ವಿಷ್ಣುಮಿತ್ರ ವೃಂದದ ಅಧ್ಯಕ್ಷ ದೇವಿಪ್ರಸಾದ್ ಕೆ.ಮಾತನಾಡಿ,ಕಳೆದ 15 ವರ್ಷಗಳಿಂದ ಮಿತ್ರವೃಂದದ ವತಿಯಿಂದ ಮೊಸರುಕುಡಿಕೆ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದ್ದು,ಮುಂದೆ ವಿಂಶತಿ,ರಜತ ಸಂಭ್ರಮವನ್ನು ಅದ್ದೂರಿಯಾಗಿ ಮಾಡುವ ಬಗ್ಗೆ ಚಿಂತನೆ ಇದೆ.ಈ ಸಮಯದಲ್ಲಿ ಸಂಘದಲ್ಲಿ 50 ಸದಸ್ಯರನ್ನು ಮಾಡುವ ಗುರಿಹೊಂದಲಾಗಿದೆ ಎಂದರು.

ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕ್ರೀಡಾಪಟು ನಿತಿನ್ ಕಾಪುತಮೂಲೆ ಹಾಗೂ ಎಸ್ಸೆಸೆಲ್ಸಿ ಸಾಧಕಿ ಸಂಗೀತಾ ಅವರನ್ನು ಸನ್ಮಾನಿಸಲಾಯಿತು.ಅಂಕತಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಧ್ಯಕ್ಷ ರೋಶನ್ ಬಂಗೇರ ಬಾಲಾಯ ,ಶ್ರೀ ವಿಷ್ಣುಮಿತ್ರ ವೃಂದದ ಕಾರ್ಯದರ್ಶಿ ನವೀನ್ ನಾಯ್ಕ ಕಾಪುತಕಾಡು ಉಪಸ್ಥಿತರಿದ್ದರು.ಸಂಘದ ಸದಸ್ಯರಾದ ಶ್ರೀ ಕುಮಾರ್ ಸ್ವಾಗತಿಸಿದರು. ಶಿವಪ್ರಸಾದ್ ಕೆ.ವಂದಿಸಿದರು. ಮನೀಶ್ ಕುಮಾರ್, ಲೋಕೇಶ್ ಕೆ.ಬಿ.ಕಾರ್ಯಕ್ರಮ ನಿರೂಪಿಸಿದರು.




