ತೋಟಗಳಿಗೆ ನಿರಂತರ ಕಾಡಾನೆಗಳ ದಾಳಿ – ರೈತರು ಹೈರಾಣು

(ನ್ಯೂಸ್ ಕಡಬ) newskadaba.com ಜು. 15. ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ರೈತರ ತೋಟಗಳಿಗೆ ಕಾಡಾನೆಗಳ ದಾಳಿ ನಿರಂತರವಾಗಿ ಮುಂದುವರಿದಿದ್ದು, ಜುಲೈ 13ರಂದು ತಡರಾತ್ರಿ ವ್ಯಾಪಕ ಪ್ರಮಾಣದ ಕೃಷಿ ನಾಶ ಸಂಭವಿಸಿದೆ.

ಗ್ರಾಮದ ಗುಂಡ್ಲ ನಿವಾಸಿಗಳಾದ ರವೀಂದ್ರ ಕೇಪಣ್ಣ ಮತ್ತು ಅವರ ಕಿರಿಯ ಸಹೋದರ ಸುಬ್ಬಪ್ಪ ಎಂಬವರ ತೋಟಗಳಿಗೆ ನುಗ್ಗಿದ ಆನೆಗಳ ಹಿಂಡು, ಅಲ್ಲಿ ಬೆಳೆದಿದ್ದ ಬಾಳೆ ಹಾಗೂ ಅಡಿಕೆ ಮರಗಳು ಸೇರಿದಂತೆ ಇನ್ನಿತರ ಪ್ರಮುಖ ಬೆಳೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ.

ಸುಳ್ಯ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹಿಂಡು ಹಿಂಡಾಗಿ ಆನೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಭಯ ಮತ್ತು ಆತಂಕವನ್ನು ಸೃಷ್ಟಿಸಿದೆ. ಕೃಷಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿನ ರೈತರು, ತಮ್ಮ ಕಷ್ಟದ ಬೆಳೆಗಳು ಕಾಡಾನೆಗಳ ತುಳಿತಕ್ಕೆ ಸಿಕ್ಕಿ ನಾಶವಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರ ಮತ್ತು ರಕ್ಷಣೆಗೆ ಆಗ್ರಹಿಸಿದ್ದಾರೆ.

Scroll to Top