(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 15. ಇಚಿಲಂಪಾಡಿ ಸಮೀಪದ ಗುಂಡ್ಯ ಹೊಳೆಯಲ್ಲಿ ಬ್ರಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿರುವುದರಿಂದ ಹೊಳೆಯಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗಿದೆ. ಹೊಳೆಯಲ್ಲಿ ಬಂಡೆ ಕಲ್ಲುಗಳು ಕಾಣಿಸಿಕೊಳ್ಳುತ್ತಿದ್ದು, ಹೊಳೆಯ ಮಧ್ಯದಲ್ಲಿರುವ ಬಂಡೆಕಲ್ಲಿನ ಮೇಲೆ ಮೊಸಳೆ ಇರುವುದು ಜನರ ಕಣ್ಣಿಗೆ ಬಿದ್ದಿದೆ. ಇದು ಪ್ರಚಾರವಾಗುತ್ತಿದ್ದಂತೆ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರು, ಸ್ಥಳೀಯರು ಮೊಸಳೆಯನ್ನು ಕಂಡು ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದರು.
ಮೊಸಳೆ ಕಾಣಿಸಿಕೊಂಡಿರುವ ಹೊಳೆ ಜಾಗದ ಎರಡೂ ಬದಿಗಳಲ್ಲಿ ಮನೆಗಳು ಹಾಗೂ ಕೃಷಿ ತೋಟಗಳಿದ್ದು ನಿತ್ಯವೂ ಜನರು ಹೊಳೆಯ ಸಮೀಪ ಓಡಾಡುತ್ತಿರುತ್ತಾರೆ. ಇದೀಗ ಹೊಳೆಯಲ್ಲಿ ಮೊಸಳೆ ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.









