(ನ್ಯೂಸ್ ಕಡಬ) newskadaba.com, ಜು.11 : ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಒಂದೂವರೆ ವರ್ಷದ ಮಗುವನ್ನು ಅತ್ಯಂತ ಕ್ರೂರವಾಗಿ ನೆಲಕ್ಕೆ ಬಡಿದು ಕೊಂದಿದ್ದ ಆರೋಪಿ ಜಿತೇಂದ್ರನಿಗೆ ಜಿಲ್ಲಾ ನ್ಯಾಯಾಲಯವು ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಮಹತ್ವದ ತೀರ್ಪು ನೀಡಿದೆ. ವಿಶೇಷವೆಂದರೆ, ಅಪರಾಧ ನಡೆದ ಕೇವಲ 40 ದಿನಗಳಲ್ಲಿ ಈ ಶಿಕ್ಷೆ ಪ್ರಕಟವಾಗಿದೆ.
ಗಂಡನಿಂದ ದೂರವಿದ್ದ ಶಿಕ್ಷಕಿ ರತಿದೇವಿ (24) ಎಂಬಾಕೆಯನ್ನು ಮದುವೆಯಾಗುವಂತೆ ಕಿರಾಣಿ ಅಂಗಡಿ ನಡೆಸುತ್ತಿದ್ದ ಜಿತೇಂದ್ರ ಪೀಡಿಸುತ್ತಿದ್ದ. ಆದರೆ ತನಗೆ ಈಗಾಗಲೇ ಮದುವೆಯಾಗಿದ್ದು, ಮಗನಿದ್ದಾನೆ ಎಂದು ಆಕೆ ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದರಿಂದ ಕೆರಳಿದ ಆರೋಪಿ, ಮದುವೆಗೆ ಮಗುವೇ ಅಡ್ಡಿಯೆಂದು ಭಾವಿಸಿ ಮೇ 31ರಂದು ಚಾಕ್ಲೆಟ್ ಕೊಡಿಸುವ ಆಮಿಷವೊಡ್ಡಿ ಮಗುವನ್ನು ಅಪಹರಿಸಿದ್ದ. ತದನಂತರ ಮಗುವನ್ನು ನೆಲಕ್ಕೆ ಬಡಿದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ.
ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಇದೀಗ ನ್ಯಾಯಾಲಯವು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ.








