(ನ್ಯೂಸ್ ಕಡಬ) newskadaba.com, ಜು.11 :ಸರ್ಕಾರಿ ಕೆಲಸ ಮತ್ತು ಆಸ್ತಿಗಾಗಿ ತನ್ನ ತಾಯಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಆರೋಪದಡಿ 23 ವರ್ಷದ ಆಯುಷಿ ಶರ್ಮಾ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಯ ತಂದೆಯ ಸಾವಿನ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಆರೋಪಿ ಆಯುಷಿ ಶರ್ಮಾ ತನಗೆ ತಂದೆಯ ಸರ್ಕಾರಿ ಉದ್ಯೋಗ (ಅನುಕಂಪದ ಆಧಾರದ ನೌಕರಿ) ಸಿಗಬೇಕೆಂದು ಬಯಸಿದ್ದಳು. ಆದರೆ ಆ ಕೆಲಸ ತಾಯಿ ನೀರಜ್ ಶರ್ಮಾಗೆ ಸಿಕ್ಕಿದ್ದರಿಂದ ಹಾಗೂ ಆಸ್ತಿ ವಿವಾದವಿದ್ದರಿಂದ ತಾಯಿಯ ಕೊಲೆಗೆ ಸಂಚು ರೂಪಿಸಿದ್ದಳು.
ಚಿಕ್ಕಪ್ಪ ಮತ್ತು ಸೋದರಸಂಬಂಧಿ ಜೊತೆಗೂಡಿ 7 ಲಕ್ಷ ರೂ. ಸುಪಾರಿ ನೀಡಿ, ಜುಲೈ 3ರಂದು ತಾಯಿ ನೀರಜ್ ಶರ್ಮಾ ಅವರಿಗೆ ಸ್ಕಾರ್ಪಿಯೋ ಕಾರಿನಿಂದ ಡಿಕ್ಕಿ ಹೊಡೆಸಿ ಅಪಘಾತದಂತೆ ಕೊಲೆ ಮಾಡಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕೃತ್ಯವನ್ನು ಪತ್ತೆಹಚ್ಚಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದ ಆಯುಷಿಯ ತಂದೆ ವಿಜಯ್ ಶರ್ಮಾ ಅವರದ್ದು ನೈಸರ್ಗಿಕ ಸಾವಲ್ಲ, ಅದೂ ಕೂಡ ಕೊಲೆಯಾಗಿರಬಹುದು ಎಂದು ಆಕೆಯ ಸೋದರಮಾವ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.












