(ನ್ಯೂಸ್ ಕಡಬ) newskadaba.com,ಜು.06: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಲ್ಲಿ ನಿಯಮಿತ ಕಾರ್ಯಾಚರಣೆಯ ಅಂಗವಾಗಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವಾಗ, ಆಕಸ್ಮಿಕವಾಗಿ ಮರದ ದಿಮ್ಮಿ ಬಡಿದು ದಸರಾ ಗಜಪಡೆಯ ನಾಯಕ ‘ಅಭಿಮನ್ಯು’ ಆನೆಯ ಎಡಭಾಗದ ದಂತದ ಮುಂದಿನ ತುದಿ ಮುರಿದಿದೆ.
ಘಟನೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡ ಆನೆಯನ್ನು ಪರೀಕ್ಷಿಸಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ದೃಢಪಡಿಸಿದೆ. ಸದ್ಯ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಮುರಿದ ದಂತವು ಕಾಲಕ್ರಮೇಣ ನೈಸರ್ಗಿಕವಾಗಿ ಬೆಳೆಯುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಆನೆ ಸಂಪೂರ್ಣ ಆರೋಗ್ಯವಾಗಿದ್ದು, ಈ ಘಟನೆಯಿಂದ ಅಂಬಾರಿ ಹೊರುವ ಸಾಮರ್ಥ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. 2020ರಿಂದ ಸತತವಾಗಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು, ಮುಂಬರುವ 2026ರ ದಸರಾ ಮಹೋತ್ಸವದಲ್ಲೂ ಸತತ 7ನೇ ಬಾರಿಗೆ ಗಜಪಡೆಯ ನಾಯಕನಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾನೆ.









