(ನ್ಯೂಸ್ ಕಡಬ) newskadaba.com, ಮೇ.25: ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಭಾನುವಾರ 10 ಜನರ ಮೃತದೇಹ ಪತ್ತೆಯಾಗಿದ್ದವು, ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನ ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ.
ನದಿಯಲ್ಲಿ ನಾಪತ್ತೆಯಾಗಿದ್ದವರಿಗಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದ ಎನ್ಡಿಆರ್ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕಾಣೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ತಟ್ಟೆಹಕ್ಕಲು ನದಿಯ ಅಳವೆಯಲ್ಲಿ ಪತ್ತೆಯಾಗಿದೆ.
ನದಿಯ ನೀರಿನಲ್ಲಿ ಕಾಣೆಯಾಗಿದ್ದ ಶವಗಳನ್ನು ಪತ್ತೆ ಹಚ್ಚಲು ಎನ್ಡಿಆರ್ಫ್ ತಂಡದ ಶೋಧ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದ್ದರು. ಅಗ್ನಿಶಾಮಕ ದಳ ಹಾಗೂ ಎನ್ಡಿಆರ್ಎಫ್ ತಂಡಗಳು ಪ್ರತ್ಯೇಕವಾಗಿ ಶೋಧ ನಡೆಸಿದ್ದವು. ಇದಕ್ಕೆ ಸ್ಥಳೀಯ ಮೀನುಗಾರರು ಸಾಥ್ ನೀಡಿದರು.









