(ನ್ಯೂಸ್ ಕಡಬ) newskadaba.com, ಮೇ.24: ನಾಟಕಗಳು ಜೀವನಕ್ಕೆ ಪಾಠವಾಗಿದೆ. ಆದ್ದರಿಂದ ರಂಗಾಸಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಈ ನೂರರ ಸಂಭ್ರಮ ಒಂದು ದಾಖಲೆಯಾಗಿದ್ದು ಇದು ಇತಿಹಾಸದ ಪುಟ ಸೇರಲಿ. ಇಂತಹ ಮಹಾನ್ ಕಲಾವಿದರಿಗೆ ಹೆಚ್ಚಿನ ಆಯುಷ್ಯ ಪ್ರಾಪ್ತಿಯಾಗಬೇಕು. ಕಲಾವಿದರ ಮುನ್ನಡೆಗೆ ಸಾಂಘಿಕವಾಗಿ ಬಲ ತುಂಬುವ ಕೆಲಸ ಕಲಾಭಿಮಾನಿಗಳಿಂದ ಆಗಬೇಕು. ಈ ಮೂಲಕ ನಾಟಕಗಳ ಒಲವು ಹೆಚ್ಚುವುದು ಮತ್ತು ಕಲಾವಿದರ ಬಲವರ್ಧನೆ ಸಾಧ್ಯವಾಗುವುದು ಎಂದು ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ವರ್ ನಂದಳಿಕೆ ತಿಳಿಸಿದರು.
ಕಾಥೋಲಿಕ್ ಕೊಂಕಣ್ ಸಂಚಾಲನ್ ಚಿಕ್ಕಮಗಳೂರು ಮತ್ತು ಹಾಸನ ಸಂಸ್ಥೆಯು ಕೊಂಕಣಿ ನಾಟಕ ರಂಗದ ಹಿರಿಯಣ್ಣ ಪ್ರಸಿದ್ಧ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ಕೊಮೆಡಿ ಕಿಂಗ್ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಸಾರಥ್ಯದ ಮುಂಬಯಿ ನಾಟಕ ತಂಡವು ಇಂದಿಲ್ಲಿ ಶನಿವಾರ ಸಂಜೆ ಚಿಕ್ಕಮಗಳೂರು ಆದರ್ಶ ನಗರದಲ್ಲಿನ ಕುವೆಂಪು ಕಲಾ ಮಂದಿರದಲ್ಲಿ ಪ್ರಸ್ತುತ ಪಡಿಸಿದ ‘ಮ್ಹಾತಾರೊ ಚರ್ಬೆಲಾ’ ನಾಟಕದ 100ನೇ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ವಾಲ್ಟರ್ ನಂದಳಿಕೆ ಮಾತನಾಡಿದರು.
ಶತ ಪ್ರದರ್ಶನದ ಪ್ರಯುಕ್ತ ನಡೆಸಲ್ಪಟ್ಟ ಸಭಾಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಕರ್ನಾಟಕ ಸಿವಿಲ್ ಜಡ್ಜ್ ನಿತಿನ್ ಕುವೆಲ್ಲೋ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಥಾನಿ ಆಲ್ವಾರಿಸ್, ಪತ್ರಕರ್ತ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದು ನಾಟಕ ತಂಡದ ಅವಿರತ ಶ್ರಮದ ಹಾಗೂ ಭಾಷಾಭಿಮಾನದ ಫಲ ಈ ನೂರರ ಪ್ರಯೋಗ ರಂಗ ಕ್ಷೇತ್ರದ ಹೆಗ್ಗುರುತು ಆಗಿದೆ ಎಂದರು. ಹಾಗೂ ‘ಮ್ಹಾತಾರೊ ಚರ್ಬೆಲಾ’ ನಾಟಕ ತಂಡದ ಪ್ರಮುಖ ರೂವಾರಿ ಫ್ರಾನ್ಸಿಸ್ ಫೆರ್ನಾಂಡಿಸ್ ಮತ್ತು ಜೊಯ್ ಪಾಲಡ್ಕ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು. ಅಂತೆಯೇ ತಂಡದ ಇತರ ಕಲಾವಿದರನ್ನೂ ಅತಿಥಿಗಳನ್ನೂ ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಡ್ಜ್ ನಿತಿನ್ ಕುವೆಲ್ಲೋ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ದಾಯ್ಜಿವರ್ಲ್ಡ್ ನ ಪ್ರವೀಣ್ ತಾವ್ರೋ, ಎಂಸಿಸಿ ಬ್ಯಾಂಕ್ನ ನಿರ್ದೇಶಕ ಆಡ್ವಕೇಟ್ ಎ.ಪಿ ಮೊಂತೆರೋ, ಮತ್ತಿತರರು ವಿಶೇಷ ಆಮಂತ್ರಿತರಾಗಿ, ಕಾಥೋಲಿಕ್ ಕೊಂಕಣ್ ಸಂಚಾಲನ್ ಅಧ್ಯಕ್ಷ ಜೋಕಿಂ ಡಿಸೋಜಾ, ಉಪಾಧ್ಯಕ್ಷ ಕಿರಣ್ ಡಿಸೋಜಾ, ಮಾಜಿ ಅಧ್ಯಕ್ಷ ಪ್ರಮೋದ್ ಪಿಂಟೋ, ಗೌ। ಕಾರ್ಯದರ್ಶಿ ಲಿಯೋ ಮಥಾಯಸ್, ಗೌ। ಕೋಶಾಧಿಕಾರಿ ವಿನ್ವೆಂಟ್ ಫುರ್ಟಾಡೋ, ಜೊತೆ ಕಾರ್ಯದರ್ಶಿ ಡಿಂಪಲ್ ಕುವೆಲ್ಲೋ, ಪೋಷಕ ಸದಸ್ಯ ಸ್ಟೇನಿ ಡಿಸಿಲ್ವಾ ಉಪಸ್ಥಿತರಿದ್ದರು.
83ರ ಹರೆಯದ ಹಿರಿಯಣ್ಣ, ಅಪ್ರತಿಮ ಕಲಾವಿದ ಫ್ರಾನ್ಸಿಸ್ ಫೆರ್ನಾಂಡಿಸ್ ರಚಿಸಿ ಹಿರಿಯ ರಂಗ ಸಂಘಟಕ, ಕಲಾವಿದ ಜೊಯ್ ಪಾಲಡ್ಕ ನಿರ್ದೇಶನದಲ್ಲಿ ನೂರನೇ ಪ್ರದರ್ಶನ ಕಂಡ ‘ಮ್ಹಾತಾರೊ ಚರ್ಬೆಲಾ’ ನಾಟಕದಲ್ಲಿ ಮೂರು ದಶಕಗಳ ಹಿಂದಿನ ಬಹುತೇಕ ಕಲಾವಿದರೇ ನಟಿಸಿ ಯಶಸ್ವಿಯಾಗಿ ನಾಟಕ ಪ್ರದರ್ಶಿಸಿದರು. ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದು, ಜೊಯ್ ಪಾಲಡ್ಕ, ಬೆಟ್ಟಿ ನಾಜ್ ಬಾಂದ್ರ, ಜ್ಯೂಲಿ ವಾಜ್ ಮರೋಳ್, ಫ್ಲೋರಾ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ), ಶಾಂತಿ ಬಾರ್ಬೊಜಾ ಬೊಳಿಯೆ, ಗ್ರೇಗರಿ ಸಿಕ್ವೆರಾ ನಿಡೋಡಿ, ಪೀಟರ್ ಪಾಯ್ಸ್ ಬನ್ನೂರು, ಪೀಟರ್ ಕುಟಿನ್ಹೋ ಮುಂಡೂರು, ಲವಿನಾ ಡಿಸೋಜಾ ಜೆರಿಮೆರಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಗಾಂಧವ್ಯ ಆಕಾಡೆಮಿ ಅವರಿಂದ ನೃತ್ಯ ಪ್ರದರ್ಶನ ನೇರವೇರಿತು. ವಿನ್ವೆಂಟ್ ಫೆರ್ನಾಂಡಿಸ್ ಕೊಂಕಣಿ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ನೆರೆದಿದ್ದ ನಾಟಕ ಕಲಾಭಿಮಾನಿಗಳು, ಮ್ಹಾತಾರೊ ಹಿತೈಷಿಗಳು ವಿಶೇಷವಾಗಿ ಫ್ರಾನ್ಸಿಸ್ ಫೆರ್ನಾಂಡಿಸ್ ಹಾಗೂ ಅತಿಥಿಗಳನ್ನು ವಾದ್ಯಘೋಷಗಳ ನೀನಾದದೊಂದಿಗೆ ವೈಭವೋಪೇತವಾಗಿ ಕಲಾಮಂದಿರಕ್ಕೆ ಬರಮಾಡಿ ಕೊಂಡತು.
ಲಿಯೋ ಮಥಾಯಸ್ ಪ್ರಾರ್ಥನೆಗೈದರು. ವೀಣಾ ಲೋಬೊ ಸ್ವಾಗತಿಸಿದರು. ಜೆನಿಫರ್ ಆಂದ್ರಾದೆ ಸನ್ಮಾನ ಪತ್ರ ವಾಚಿಸಿದರು. ವಿನ್ಸೆಂಟ್ ಮೆಂಡೊನ್ನಾ ಕಲಾವಿದರನ್ನು ಪರಿಚಯಿಸಿದರು. ಜೆನಿಫರ್ ವಾಸ್ ಕಾರ್ಯಕ್ರಮ ನಿರೂಪಿಸಿದರು. ಸಿಲ್ವೆಸ್ಟರ್ ಸಲ್ಡಾನಾ ಧನ್ಯವಾದ ಸಮರ್ಪಿಸಿದರು.









