‘ನೀತಿ ಸಂಹಿತೆ’ ಉಲ್ಲಂಘನೆ – ಹಾರ್ದಿಕ್ ಪಾಂಡ್ಯಗೆ ಕಠಿಣ ಶಿಕ್ಷೆ ವಿಧಿಸಿದ ಬಿಸಿಸಿಐ



(ನ್ಯೂಸ್‌ ಕಡಬ) newskadaba.com,  ಮೇ.23: ಐಪಿಎಲ್ 2026ರಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಬಿಸಿಸಿಐ ಕಠಿಣ ಶಿಕ್ಷೆ ವಿಧಿಸಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪಂದ್ಯ ಶುಲ್ಕದ 10 ಶತಮಾನ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.







ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಇನ್ನಿಂಗ್ಸ್‌ನ 10ನೇ ಓವರ್ ವೇಳೆ ಈ ಘಟನೆ ನಡೆದಿದೆ. ಹಾರ್ದಿಕ್ ಪಾಂಡ್ಯ ತಮ್ಮ ರನ್-ಅಪ್‌ಗೆ ಹಿಂದಿರುಗುವಾಗ ಉದ್ದೇಶಪೂರ್ವಕವಾಗಿ ವಿಕೆಟ್‌ನ ಬೇಲ್‌ಗಳನ್ನು ಕೆಡವಿದರೆಂದು ಆರೋಪಿಸಲಾಗಿದೆ. ಈ ನಡೆ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ಉಲ್ಲಂಘನೆ ಎಂದು ಪರಿಗಣಿಸಲಾಗಿದ್ದು, ಇದು “ಕ್ರಿಕೆಟ್ ಉಪಕರಣಗಳು, ಮೈದಾನದ ಸಾಧನಗಳು ಅಥವಾ ಫಿಕ್ಚರ್‌ಗಳ ದುರುಪಯೋಗ”ಕ್ಕೆ ಸಂಬಂಧಿಸಿದೆ.






ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ಪ್ಲೇಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡದ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯವನ್ನು ಒಪ್ಪಿಕೊಂಡರು.

“ಪವರ್‌ಪ್ಲೇನಲ್ಲಿ ನಾವು ಬೇಗ ವಿಕೆಟ್ ಕಳೆದುಕೊಂಡೆವು. ತಿಲಕ್ ಮತ್ತು ನಾನು ಇನ್ನೂ ಸ್ವಲ್ಪ ಸಮಯ ಕ್ರೀಸ್‌ನಲ್ಲಿ ಉಳಿದಿದ್ದರೆ 15-20 ರನ್ ಹೆಚ್ಚಿಸಬಹುದಿತ್ತು. ಆಗ ನಮಗೆ ಉತ್ತಮ ಅವಕಾಶ ಇರುತ್ತಿತ್ತು,” ಎಂದು ಹೇಳಿದರು. ಐಪಿಎಲ್‌ನಲ್ಲಿ ಬ್ಯಾಟಿಂಗ್ ಪ್ರಾಬಲ್ಯ ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಹಾರ್ದಿಕ್, “ಬೌಲರ್‌ಗಳಿಗೆ ಸಹಾಯ ಮಾಡುವ ಪಿಚ್‌ಗಳಲ್ಲಿ ಆಡಲು ನನಗೆ ಇಷ್ಟ. ಇಂತಹ ವಿಕೆಟ್‌ಗಳು ಉತ್ತಮ ಕ್ರಿಕೆಟ್‌ಗೆ ಸಹಕಾರಿ,” ಎಂದರು.

ತಂಡದ ಕಳಪೆ ಫೀಲ್ಡಿಂಗ್ ಬಗ್ಗೆ ಮಾತನಾಡಿದ ಅವರು, “ಈ ಸೀಸನ್‌ನಲ್ಲಿ ನಾವು ಸಾಕಷ್ಟು ಕ್ಯಾಚ್‌ಗಳನ್ನು ಕೈಬಿಟ್ಟಿದ್ದೇವೆ. ಪಂದ್ಯ ಗೆಲ್ಲಬೇಕಾದರೆ ಅರ್ಧ ಅವಕಾಶವನ್ನೂ ಕೈಚೆಲ್ಲಬಾರದು,” ಎಂದು ಬೇಸರ ವ್ಯಕ್ತಪಡಿಸಿದರು.

error: Content is protected !!
Scroll to Top