(ನ್ಯೂಸ್ ಕಡಬ) newskadaba.com ಮೇ. 22. ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಗೂಡಿನ ಬಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಇರ್ಫಾನ್ (36) ಎಂಬವರ ಮೃತದೇಹವು ಪಾಣೆಮಂಗಳೂರು ನೂತನ ಸೇತುವೆ ಕೆಳಭಾಗದಲ್ಲಿ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ತ್ಯಾಜ್ಯ ನಿರ್ವಹಣೆ ಕಾರ್ಯ ಮಾಡುತ್ತಿದ್ದ ವೇಳೆ ಮೃತದೇಹ ಕಂಡು ಬಂದಿದ್ದು, ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಪೋಲೀಸರು ಹಾಗೂ ಗೂಡಿನಬಳಿಯ ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿ, ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣಕ್ಕಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣದಲ್ಲಿ ಇಡಲಾಗಿತ್ತು. ಸಂಜೆ ವೇಳೆ ಮೃತದೇಹದ ಗುರುತು ಪತ್ತೆಯಾಗಿದ್ದು, ಗೂಡಿನ ಬಳಿ ನಿವಾಸಿ ಇರ್ಫಾನ್ ಎಂದು ಹೇಳಲಾಗಿದೆ. ಕಳೆದ ಮೂರು ವರ್ಷ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಈತ ಮೂರು ವರ್ಷಗಳ ಹಿಂದೆಯಷ್ಟೆ ಊರಿಗೆ ಮರಳಿ ಬಳಿಕ ಸ್ವಂತ ರಿಕ್ಷಾ ಖರೀದಿಸಿ ಅದರಲ್ಲಿ ದುಡಿಯುತ್ತಿದ್ದರು.
ವಿವಾಹಿತನಾಗಿರುವ ಈತನಿಗೆ ಮೂವರು ಮಕ್ಕಳಿದ್ದಾರೆ. ಆದರೆ ಮೂರು ದಿನಗಳಿಂದ ಈತ ಕಾಣೆಯಾಗಿದ್ದ ಎಂದು ಹೇಳಲಾಗಿದ್ದು, ಇದೀಗ ಈತನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಕೈ ಗಳಲ್ಲಿ ಗಾಯಗಳಿರುವುದರಿಂದ ಸಾವಿನಲ್ಲಿ ಸಂಶಯವಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಲ್ಲದೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ನ್ಯಾಯ ಒದಗಿಸಿಕೊಡುವಂತೆ ಕುಟುಂಬ ಮೂಲಗಳು ಪಟ್ಟು ಹಿಡಿದಿದ್ದಾರೆ.









