(ನ್ಯೂಸ್ ಕಡಬ) newskadaba.com,ಮೇ.20: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ರೇಣುಕೈ ಕೆಮಿಸ್ಟ್ರಿ ಕ್ಲಾಸಸ್ (ಆರ್ಸಿಸಿ) ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್ 8 ಎಕರೆ ಜಾಗದಲ್ಲಿ ಶಾಲೆ ಹಾಗೂ ಕಾಲೇಜು ಆರಂಭಿಸಲು ಮುಂದಾಗಿದ್ದ ವಿಚಾರ ಬಹಿರಂಗವಾಗಿದೆ..
ಸಿಬಿಐ ಬಂಧನದ ಬಳಿಕ ಮೋಟೆಗಾಂವ್ಕರ್ ಆಸ್ತಿ ಹಾಗೂ ಹಣದ ಮೂಲದ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿವೆ. ಮೋಟೆಗಾಂವ್ಕರ್ ನಡೆಸುತ್ತಿದ್ದ ಆರ್ಸಿಸಿ ಕೋಚಿಂಗ್ ಸಂಸ್ಥೆ ಮಹಾರಾಷ್ಟ್ರದ ಸುತ್ತಲೂ ಜನಪ್ರಿಯತೆ ಪಡೆದಿದ್ದು, ಲಾತೂರ್ ಸೇರಿ ಒಟ್ಟು 9 ಶಾಖೆಗಳಿವೆ.
ಈ ಸಂಸ್ಥೆಯ ಮೂಲಕ ಗಳಿಸಿದ ಹಣದಲ್ಲಿ ಈತ ಮಹಾರಾಷ್ಟ್ರದ ಲಾತೂರ್ ಸಮೀಪದ ಖೋಪೇಗಾಂವ್ ಶಿವಾರ್ ಪ್ರದೇಶದಲ್ಲಿ ಶಾಲೆ ಮತ್ತು ಕಾಲೇಜು ನಿರ್ಮಾಣ ಮಾಡಲು ಮುಂದಾಗಿದ್ದ. ಈಗಾಗಲೇ ಎಂಟು ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.
‘ಎಮ್ ಸರ್’ ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ?
ಮೇ 3ರಂದು ನಡೆದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ, ಮೋಟೆಗಾಂವ್ಕರ್ ನಿವಾಸ ಹಾಗೂ ಸಂಸ್ಥೆಯಲ್ಲಿ ಶೋಧ ನಡೆಸಿದ ವೇಳೆ ಆತನ ಮೊಬೈಲ್ನಲ್ಲಿ ಸೋರಿಕೆಯಾದ ಪ್ರಶ್ನೆಪತ್ರಿಕೆ ಪತ್ತೆಯಾಗಿದೆ.
ಮೋಟೆಗಾಂವ್ಕರ್ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ)ಗೆ ಸಂಬಂಧ ಹೊಂದಿರುವ ಕೆಮಿಸ್ಟ್ರಿ ಉಪನ್ಯಾಸಕ ಪಿ.ವಿ. ಕುಲಕರ್ಣಿ ಅವರ ಆಪ್ತ ಎಂದು ಸಿಬಿಐ ಹೇಳಿದೆ. ಆತನ ಸಂಸ್ಥೆಯಲ್ಲಿ ಪತ್ತೆಯಾದ ಕೆಮಿಸ್ಟ್ರಿ ಮಾದರಿ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಗಳೇ ನೀಟ್ ಪರೀಕ್ಷೆಯಲ್ಲಿ ಬಂದಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೆ ದೆಹಲಿ, ಜೈಪುರ, ಗುರುಗ್ರಾಮ, ನಾಸಿಕ್, ಪುಣೆ, ಲಾತೂರ್ ಹಾಗೂ ಅಹಿಲ್ಯಾನಗರ ಸೇರಿ ವಿವಿಧ ಸ್ಥಳಗಳಿಂದ 10 ಮಂದಿಯನ್ನು ಬಂಧಿಸಲಾಗಿದೆ.









