ರಾಜ್ಯ ರಾಜಧಾನಿಯಲ್ಲಿ‌ ಕಂಬಳ ನಡೆಸಲು ಅನುಮತಿಸಿದ ಹೈಕೋರ್ಟ್



(ನ್ಯೂಸ್ ಕಡಬ) newskadaba.com ಅ. 16. ಕರಾವಳಿಯಿಂದ ಹೊರಗೆ ಕಂಬಳ ನಡೆಸುವುದಕ್ಕೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಕಂಬಳ ಆಯೋಜನೆಗೆ ಪೇಟಾದವರು ತಕರಾರು ಮಾಡಿದ ಹಿನ್ನೆಲೆಯಲ್ಲಿ ನಿಂತು ಹೋಗಿದ್ದ ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಕಂಬಳ ನಡೆಸಲು ಹೈಕೋಟ್೯ ಇದೀಗ ಅನುಮತಿ ನೀಡಿದೆ.







ಪುತ್ತೂರು ಶಾಸಕ ಅಶೋಕ್‌ ರೈಯವರು ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆದರೆ ಅದರ ಮರುವರ್ಷ ಬೆಂಗಳೂರಿನಲ್ಲಿ ಮತ್ತೆ ಕಂಬಳ ನಡೆಸಲು ಮುಂದಾದಾಗ ಪೆಟಾ ತಕರಾರು ತೆಗೆದು ಕೋರ್ಟ್‌ ಮೆಟ್ಟಿಲೇರಿತ್ತು. ಇದರಿಂದಾಗಿ ಮತ್ತೆ ಬೆಂಗಳೂರಿನಲ್ಲಿ ಕಂಬಳ ನಡೆದಿರಲಿಲ್ಲ.






ಇದೀಗ ಹೈಕೋರ್ಟ್‌ ಕಂಬಳಕ್ಕೆ ಗ್ರೀನ್‌ ಸಿಗ್ನಲ್‌ ನೀಡಿರುವುದರಿಂದ ಈ ವರ್ಷ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆಯೇ ಎಂಬ ಕುತೂಹಲವಿದೆ. ಸರ್ಕಾರ ಅಧೀನದ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಹೈಕೋರ್ಟ್‌ ತೀರ್ಪಿನಿಂದ ಮೊದಲ ಜಯ ಸಿಕ್ಕಂತಾಗಿದೆ.

 

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ಡಾ.ದೇವಿ ಪ್ರಸಾದ್ ಶೆಟ್ಟಿ, ಇದು ನಮ್ಮ ಹೋರಾಟಕ್ಕೆ ಸಂದ ಜಯ. ಕಂಬಳ ಕ್ಷೇತ್ರದಲ್ಲಿ ಸಂತಸದ ಕ್ಷಣ. ಸಾಗಾಟದ ವೇಳೆ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪೇಟಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ವಿನೋದ್ ಕುಮಾರ್ ಮಧೂರು, ಧನಂಜಯ್ ಕುಮಾರ್ ದೊಡ್ಡಗುತ್ತು ಕಂಬಳದ ಪರ ವಾದ ಮಂಡಿಸಿದ್ದರು.

ಜಿಲ್ಲೆಯ ಕಂಬಳವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಸರ್ಕಾರ ಕೂಡಾ ಇದಕ್ಕೆ ಮಾನ್ಯತೆ ನೀಡಿದೆ ಎಂದು ಕೋರ್ಟ್ ನಮ್ಮ ಬೇಡಿಕೆಯನ್ನು ಪುರಸ್ಕರಿಸಿದೆ. ಆಯಾ ಕಂಬಳಗಳ ಸಮಿತಿಯವರ ಹೋರಾಟ ಫಲ ನೀಡಿದೆ. ಆದರೆ, ಪಿಲಿಕುಳ ಕಂಬಳ ನಡೆಸುವ ಕುರಿತು ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.

error: Content is protected !!
Scroll to Top