(ನ್ಯೂಸ್ ಕಡಬ) newskadaba.com ವಿಟ್ಲ, ಎ.01. ಈಜಾಡಲೆಂದು ಬಾವಿಗೆ ಇಳಿದ ಮೂವರು ಬಾಲಕರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಮುಡ್ನೂರು ಎಂಬಲ್ಲಿ ಭಾನುವಾರದಂದು ನಡೆದಿದೆ.

ಮೃತ ಬಾಲಕನನ್ನು ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಪಿಲಿಂಜ ನಿವಾಸಿ, ಪುಣಚ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ದಕ್ಷಣ್ ಎಂದು ಗುರುತಿಸಲಾಗಿದೆ. ಈತ ಭಾನುವಾರದಂದು ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರ ಜೊತೆ ಆಟವಾಡಲೆಂದು ಬಾವಿಯ ಬಳಿಗೆ ತೆರಳಿದ್ದು, ಬಳಿಕ ನೀರಿನಲ್ಲಿ ಆಟವಾಡಲೆಂದು ಇಳಿದಿದ್ದಾನೆ. ಆದರೆ ನೀರಾಟವಾಡುವ ಸಂದರ್ಭ ದಕ್ಷಣ್ ಮುಳುಗಲಾರಂಭಿಸಿದ್ದು, ಇದನ್ನು ಗಮನಿಸಿದ ಆತನ ಸ್ನೇಹಿತರು ಸಹಾಯಕ್ಕಾಗಿ ಕಿರುಚಲಾರಂಭಿಸಿದ್ದಾರೆ. ತಕ್ಷಣವೇ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಕಾರ್ಯಾಚರಣೆ ನಡೆಸಿದರಾದರೂ ಅದಾಗಲೇ ದಕ್ಷಣ್ ಮೃತಪಟ್ಟಿದ್ದನೆನ್ನಲಾಗಿದೆ. ಮುಳುಗುತ್ತಿದ್ದ ಇನ್ನೋರ್ವ ಯುವಕನನ್ನು ರಕ್ಷಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.










