ಆಲಂಕಾರು ಮೂರ್ತೆದಾರರ ಸಹಕಾರಿ ಸಂಘದಲ್ಲಿ ಇ-ಸ್ಟಾಂಪಿಂಗ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com , ಆಲಂಕಾರು ಮಾ.23. ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರು ಪ್ರಧಾನ ಕಚೇರಿ ಹಾಗೂ ಕಡಬ ಶಾಖೆಯಲ್ಲಿ ಏಕಕಾಲದಲ್ಲಿ ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.

ಆಲಂಕಾರು ಪ್ರಧಾನ ಕಚೇರಿಯಲ್ಲಿ ಸ್ಥಳೀಯ ಉಧ್ಯಮಿ ಆಲಂಕಾರು ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ಉದ್ಘಾಟಿಸಿದರು. ನಂತರ ಮಾತನಾಡಿ ಸಹಕಾರಿ ಸಂಸ್ಥೆಗಳು ಉನ್ನತ ಸೇವಾ ಮನೋಭಾವದ ಜೊತೆಗೆ ಇಂತಹ ಉನ್ನತ ಸೇವೆಗಳನ್ನು ಮಾಡುವುದರ ಮೂಲಕ ಗ್ರಾಹಕರನ್ನು ತೃಪ್ತಿಪಡಿಸುವ ಯೋಜನೆಗಳನ್ನು ಜಾರಿಗೊಳಿಸಿ ತಾಲೂಕಿಗೆ ಮಾದರಿ ಸಹಕಾರಿ ಸಂಘವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು ಪ್ರಾಸ್ತಾವಿಕವಾಗಿ ಮಾತನಾಡಿ ಈಗಾಗಲೇ ಬ್ಯಾಂಕಿನ ಕಾರ್ಯ ವ್ಯಾಪ್ತಿಯ ಗ್ರಾಹಕರು ಸ್ಟಾಂಪ್ ಪೇಪಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನತೆಯ ಸಮಸ್ಯೆಯನ್ನು ಮನಗಂಡು ಗುರುವಾರದಿಂದ ಸ್ಟಾಂಪ್ ಪೇಪರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ವೆಸ್ಟರ್ನ್ ಯೂನಿಯನ್ ಮನಿಟ್ರಾನ್ಸ್‌ಫರ್ ವ್ಯವಸ್ಥೆಯನ್ನು ಆಲಂಕಾರು ಪ್ರಧಾನ ಕಚೇರಿ ಮತ್ತು ಕಡಬ ಶಾಖಾ ಕಚೇರಿಯಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಎಲ್ಲಾ ಶಾಖೆಗಳಿಗೆ ವಿಸ್ತರಿಸುವ ಯೋಜನೆಯ ಜೊತೆಗೆ ಇನ್ನೆರಡು ಶಾಖೆಗಳನ್ನು ಪ್ರಾರಂಭಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಮಾಡಿಕೊಳ್ಳಲಾಗಿದೆ ಎಂದರು.

ನೂತನವಾಗಿ ಆರಂಭವಾಗಿರುವ ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಸಂಘದ ನಿರ್ದೇಶಕ ಜಯಕರ ಪುಜಾರಿ ಕಲ್ಲೇರಿಯವರಿಗೆ ಪ್ರಥಮ ಸ್ಟಾಂಪ್ ಪೇಪರ್ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಪ್ರಾರಂಭಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಸೇಸಪ್ಪ ಪುಜಾರಿ ನೆಕ್ಕಿಲಾಡಿ, ಲಕ್ಷ್ಮೀಶ ಬಂಗೇರ, ಜಯಂತ ಪುಜಾರಿ ನೆಕ್ಕಿಲಾಡಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಲಿಂಗಪ್ಪ ಪೂಜಾರಿ ಸ್ವಾಗತಿಸಿ ಯೋಗಿಶ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಗುಮಾಸ್ತೆ ರಂಜಿನಿ ವಂದಿಸಿದರು.

Scroll to Top