ವಿಟ್ಲ: ಚಿನ್ನದ ವ್ಯಾಪಾರಿಯ ಮನೆ ಬೆಂಕಿಗಾಹುತಿ ► 15 ಲಕ್ಷ ರೂ. ಅಂದಾಜು ನಷ್ಟ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ.15. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಮನೆ ಸುಟ್ಟು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ವಿಟ್ಲದ ಪೊನ್ನೋಟ್ಟು ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಮೂಲತಃ ಕೇರಳ ನಿವಾಸಿ, ವಿಟ್ಲದ ಪ್ರಸಿದ್ಧ ಚಿನ್ನದ ಮಳಿಗೆಯಾಗಿರುವ ರಾಜಧಾನಿ ಜುವೆಲ್ಲರಿ ಮಾಲಕ ತಾನಾಜಿ ಎಂಬವರಿಗೆ ಸೇರಿದ ವಿಟ್ಲದ ಪೊನ್ನೋಟ್ಟು ಎಂಬಲ್ಲಿರುವ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಬುಧವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯಗೊಂಡು ಗುರುವಾರ ಬೆಳಿಗ್ಗೆ ವಿದ್ಯುತ್ ಸಂಪರ್ಕ ಬರುತ್ತಿದ್ದಂತೆ ತಾನಾಜಿ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ರಿಜ್ ನ ಸ್ವಿಚ್ ಬೋರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಬಳಿಕ ಮನೆಯ ಅಡಿಗೆ ಕೋಣೆಯೊಳಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಫ್ರಿಜ್ ಭಸ್ಮಗೊಂಡಿದೆ. ಮನೆಯ ಸ್ಲ್ಯಾಪ್ನಲ್ಲಿ ಬಿರುಕು ಬಿಟ್ಟಿದಲ್ಲದೇ ಗೋಡೆ ಬಿರುಕುಬಿಟ್ಟಿದೆ. ಮನೆಯ ವೈಯರಿಂಗ್ ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹಲವು ವಿದ್ಯುತ್ ಉಪಕರಣ ಸೇರಿದಂತೆ ಬೆಲೆಬಾಳುವ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ನಾಶ ಹೊಂದಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗಿಲ್ಲ. ಮನೆಯೊಳಗಡೆ ಇರಿಸಿದ್ದ ಎರಡು ಅನಿಲ ಸಿಲಿಂಡರ್ ಹೊರಗಡೆ ಎಸೆಯುವ ಮೂಲಕ ಸಂಭವಿಸಲಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಸಂಭವಿಸಿದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ವಿಟ್ಲ ಮೆಸ್ಕಾಂ ಉಪವಿಭಾಗದ ಎಂಜಿನಿಯರ್ ಪ್ರವೀಣ್ ಜೋಷಿ, ಶಾಖಾಧಿಕಾರಿ ವಸಂತ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ. ವಿಟ್ಲ, ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಮೊದಲಾದವರು ಬೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಘಟನೆಯಿಂದ 15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

error: Content is protected !!

Join the Group

Join WhatsApp Group