ಉಪ್ಪಿನಂಗಡಿ: ರಸ್ತೆ ಕಾಮಗಾರಿ ವೇಳೆ ನೀರಿನ ಪೈಪಿಗೆ ಹಾನಿ ► ವಾರ ಕಳೆದರೂ ಪೈಪ್ ಸರಿಪಡಿಸದಿದ್ದಕ್ಕೆ ಆಕ್ರೋಶಗೊಂಡ ಊರವರಿಂದ ಕಾಮಗಾರಿಗೆ ತಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.06. 34ನೇ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಬೊಳಂತಿಲ- ದರ್ಬೆ ರಸ್ತೆ ಕಾಮಗಾರಿಯ ವೇಳೆ ಪೈಪ್ಗಳು ಒಡೆದು ಹೋಗಿದ್ದನ್ನು ವಾರ ಕಳೆದರೂ ಸರಿಪಡಿಸಲು ಮುಂದಾಗದ ಗುತ್ತಿಗೆದಾರರ ವಿರುದ್ಧ ಆಕ್ರೋಶಗೊಂಡ ಪಾಥರ್ನ ನಿವಾಸಿಗಳು ಕಾಮಗಾರಿಯನ್ನು ತಡೆಹಿಡಿದ ಘಟನೆ ಮಂಗಳವಾರ ನಡೆದಿದ್ದು, ಪೈಪ್ ಲೈನ್ ದುರಸ್ತಿಪಡಿಸಲು ಗುತ್ತಿಗೆದಾರರು ನೇಮಿಸಿದ ವ್ಯಕ್ತಿ ಧರ್ಮ ಬೇಧ ಮಾಡುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಾರದಿಂದ ನೀರಿಲ್ಲದೆ ಕಂಗೆಟ್ಟ ಪಾಥರ್ನ ಜನತೆ ಮಂಗಳವಾರ ರಸ್ತೆ ಕಾಮಗಾರಿಗೆ ತಡೆಯೊಡ್ಡಿದ್ದು, ಕುಡಿಯುವ ನೀರಿನ ಪೈಪ್ಗಳನ್ನು ದುರಸ್ತಿ ಪಡಿಸದೇ ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಈ ಸಂದರ್ಭ ಸ್ಥಳಕ್ಕೆ ಬಂದ ತಾಳೆಹಿತ್ಲು ನೀರಿನ ಸ್ಥಾವರದ ನೀರು ನಿವರ್ಾಹಕ ಬಾಬು ಮೂಲ್ಯ ಎಂಬವರನ್ನು ಸ್ಥಳೀಯರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಬಳಿಕ ಕಾಮಗಾರಿ ಎಂಜಿನಿಯರ್, ಗುತ್ತಿಗೆದಾರ ಸಂಸ್ಥೆಯ ಸೂಪರ್ವೈಸರ್ ಸ್ಥಳಕ್ಕಾಗಮಿಸಿ ಪೈಪ್ ಲೈನ್ ಗಳ ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು ಹಾಗೂ ತಕ್ಷಣವೇ ಪೈಪ್ ಲೈನ್ ದುರಸ್ತಿ ಕಾಮಗಾರಿಗೆ ಮುಂದಾದರು. ಈ ಬಗ್ಗೆ ಕಳೆದ ಮಾ.3 ರಂದು ನಡೆದ 34ನೇ ನೆಕ್ಕಿಲಾಡಿ ಪಂಚಾಯತ್ನ ಗ್ರಾಮಸಭೆಯಲ್ಲಿ ಪ್ರಸ್ತಾಪವಾದರೂ, ಪಂಚಾಯತ್ನವರು ಇದಕ್ಕೆ ಗುತ್ತಿಗೆದಾರರೇ ಹೊಣೆ ಎಂದು ಹೇಳಿ ಜಾರಿಕೊಂಡರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪಾಥರ್ನ ನಿವಾಸಿಗಳು, ಆ ಬಳಿಕವೂ ನಾವು ಪಂಚಾಯತ್ ಗೆ ದೂರವಾಣಿ ಕರೆ ಮಾಡಿ ಹೇಳಿದರೆ ಅವರು ಗುತ್ತಿಗೆದಾರರನ್ನು ತೋರಿಸುವುದು, ಗುತ್ತಿಗೆದಾರರಿಗೆ ಕರೆ ಮಾಡಿದರೆ ಅವರು ಪೈಪ್ಲೈನ್ ದುರಸ್ತಿಪಡಿಸುತ್ತೇನೆಂದು ಒಪ್ಪಿಕೊಂಡ `ತಾಳೆಹಿತ್ಲು’ ನೀರಿನ ಸ್ಥಾವರದ ನೀರು ನಿರ್ವಾಹಕರನ್ನು ತೋರಿಸುವುದು. ಆತನಲ್ಲಿ ಹೇಳಿದರೆ ಈ ಬಗ್ಗೆ ನನಗೆ ಗೊತ್ತಿಲ್ಲ ಅಂತ ಹೇಳುವುದು ನಡೆಯುತ್ತಲೇ ಇತ್ತೇ ಹೊರತು, ಒಂದು ಹನಿ ನೀರು ಕೂಡಾ ನಮಗೆ ಪೂರೈಕೆಯಾಗುತ್ತಿರಲಿಲ್ಲ. ಹಾನಿಗೀಡಾದ ಪೈಪ್ಲೈನ್ಗಳನ್ನು ದುರಸ್ತಿ ಪಡಿಸುತ್ತೇನೆಂದು ಗುತ್ತಿಗೆದಾರರಲ್ಲಿ ಒಪ್ಪಿಕೊಂಡ ತಾಳೆಹಿತ್ಲುವಿನ ನೀರು ನಿರ್ವಾಹಕ ಧರ್ಮ ಬೇಧ ಮಾಡುತ್ತಿದ್ದಾನೆ. ಇದರಿಂದ ಕ್ರಿಶ್ಚಿಯನ್ ಕುಟುಂಬಗಳಿಗೆ ನೀರಿಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭ ಸ್ಥಳೀಯರಾದ ಮಾರ್ಕೋ ಮಸ್ಕರೇನಸ್, ಸೆಲೆಸ್ಟೀನಾ ಸಿಕ್ವೇರಾ, ರಾಬರ್ಟ್ ಸಿಕ್ವೇರಾ, ಪ್ರವೀಣ್, ಮೆಲ್ಕಂ ಮಸ್ಕರೇನಸ್, ರಾಮ ಮತ್ತಿತರರಿದ್ದರು.

ಬೊಳಂತಿಲ- ದರ್ವೆ ರಸ್ತೆ ಕಾಮಗಾರಿ ಸಂದರ್ಭ ಹಾನಿಗೀಡಾದ ಪೈಪ್ ಲೈನ್ ಗಳನ್ನು ದುರಸ್ತಿಪಡಿಸುವುದು ಅದರ ಗುತ್ತಿಗೆದಾರರ ಹೊಣೆ. ಅವರು ಈ ಕೆಲಸವನ್ನು ತಾಳೆಹಿತ್ಲು ನೀರಿನ ಸ್ಥಾವರದ ನೀರು ನಿರ್ವಾಹಕನಿಗೆ ವಹಿಸಿಕೊಟ್ಟಿದ್ದು, ಆತ ಧರ್ಮ ಬೇಧ ಮಾಡುತ್ತಿದ್ದಾನೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ. ಸಾರ್ವಜನಿಕ ಕೆಲಸಗಳನ್ನು ಮಾಡುವವವರು ಇಂತಹ ತಾರತಮ್ಯ ನೀತಿಯನ್ನು ಅನುಸರಿಸಿದರೇ ಅದನ್ನು ಸಹಿಸಲಸಾಧ್ಯ. ಇವನಿಗೆ ಮಾಡಲು ಅಸಾಧ್ಯವಾದರೆ, ಅದನ್ನು ಇನ್ನೊಬ್ಬರಿಗೆ ನೀಡಲಿ. ಅದು ಬಿಟ್ಟು ಇಂತಹ ವೈಷಮ್ಯ ತೋರುವುದು ಸರಿಯಲ್ಲ. ಇದಕ್ಕೆ ಕಾಮಗಾರಿಯ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ನೇರ ಹೊಣೆಯಾಗಿದ್ದು, ಇದು ಮುಂದುವರಿದರೆ `ನಮ್ಮೂರು- ನೆಕ್ಕಿಲಾಡಿ’ ಸಂಘಟನೆಯು ಉಗ್ರ ಹೋರಾಟ ನಡೆಸಲಿದೆ.

– ಜತೀಂದ್ರ ಶೆಟ್ಟಿ
ಅಧ್ಯಕ್ಷರು, `ನಮ್ಮೂರು- ನೆಕ್ಕಿಲಾಡಿ’

error: Content is protected !!

Join the Group

Join WhatsApp Group