ಸದ್ದಿಲ್ಲದೆ ಸ್ಥಗಿತಗೊಂಡ ಕಡಬ-ಪಂಜ ರಸ್ತೆ ಅಗಲೀಕರಣ ಕಾಮಗಾರಿ ► ಸುದ್ದಿಯಿಲ್ಲದೆ ಗಂಟುಮೂಟೆ ಕಟ್ಟಿದ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಸುಳ್ಯ ತಾಲೂಕಿನಿಂದ ನೂತನ ಕಡಬ ತಾಲೂಕನ್ನು ಸಂಪರ್ಕಿಸುವ ಪ್ರಮುಖ ಜಿಲ್ಲಾ ರಸ್ತೆಯಾಗಿರುವ ಕಡಬ-ಪಂಜ ರಸ್ತೆಯನ್ನು 5 ಕೋಟಿ ರೂ. ಅನುದಾನದಲ್ಲಿ ಆಗಲಗೊಳಿಸಿ ಉನ್ನತೀಕರಿಸುವ ಕಾಮಗಾರಿ ಕೆಲ ದಿನಗಳಿಂದ ಸ್ಥಗಿತಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ವಿವಿಧ ಉಹಾಪೋಹಗಳಿಗೆ ಕಾರಣವಾಗಿದೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ಅವರು ಕಾಮಗಾರಿಗೆ ಚಾಲನೆ ನೀಡಿದ್ದ ಬಳಿಕ ರಸ್ತೆಯನ್ನು ಆಗಲಗೊಳಿಸುವ ಕಾಮಗಾರಿ ವೇಗದಿಂದ ಮುಂದುವರೆದಿತ್ತು. ನಿರೀಕ್ಷೆಯಂತೆ ಕಾಮಗಾರಿ ನಡೆದಿದ್ದರೆ ಈಗಾಗಲೇ ಸುಂದರ ರಸ್ತೆ ನಿರ್ಮಾಣವಾಗಬೇಕಿತ್ತು. ಆದರೆ ಬಹುತೇಕ ಮಣ್ಣಿನ ಕೆಲಸ ಮುಗಿದು ಇನ್ನೇನು ಮೋರಿ ಅಳವಡಿಕೆ ಮುಂತಾದ ಕೆಲಸಗಳು ನಡೆಯಬೇಕು ಅನ್ನುವಷ್ಟರಲ್ಲಿ ಕೆಲಸ ಮಾಡುತ್ತಿದ್ದ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳು ತಮ್ಮ ಸದ್ದು ನಿಲ್ಲಿಸಿವೆ. ಮಣ್ಣು, ಜಲ್ಲಿ ಹೇರಿಕೊಂಡು ತರಾತುರಿಯಿಂದ ಸಂಚರಿಸುತ್ತಿದ್ದ ಟಿಪ್ಪರ್ ಲಾರಿಗಳು ಕಣ್ಮರೆಯಾಗಿವೆ. ಕಾರ್ಮಿಕರು ಗಂಟುಮೂಟೆ ಕಟ್ಟಿದ್ದಾರೆ. ಈ ಎಲ್ಲಾ  ಬೆಳವಣಿಗೆಯಿಂದಾಗಿ ಸುಂದರ ರಸ್ತೆಯ ಕನಸು ಕಂಡಿದ್ದ ಸ್ಥಳೀಯ ಜನರು ಮಾತ್ರ ರಸ್ತೆ ಅಭಿವೃದ್ಧಿ ಕಾಮಗಾರಿ ಇಲ್ಲಿಗೇ ನಿಂತುಬಿಡುವುದೋ ಎನ್ನುವ ಆತಂಕದಲ್ಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸುಳ್ಯ ಶಾಸಕ ಎಸ್.ಅಂಗಾರ, ರಸ್ತೆಯ ವಿಚಾರದಲ್ಲಿ ಯಾರೂ ಆತಂಕಪಡಬೇಕಿಲ್ಲ. ಕಾಮಗಾರಿಯ ಫೈನಲ್ ಅಗ್ರಿಮೆಂಟ್ ನಲ್ಲಿ ಎದುರಾದ ತಾಂತ್ರಿಕ ಅಡಚಣೆಯಿಂದಾಗಿ ಕೆಲಸ ನಿಧಾನಗೊಂಡಿರುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಾರ್ಚ್ ಪ್ರಥಮ ವಾರದಲ್ಲಿ ಕಾಮಗಾರಿಗೆ ವೇಗ ದೊರೆಯಲಿದೆ. ಈಗಾಗಲೇ ಕಳೆದ ಅವಯಲ್ಲಿ ಕಡಬದಿಂದ ಕೋಡಿಂಬಾಳದ ಮಡ್ಯಡ್ಕದ ತನಕ ಕಡಬ-ಪಂಜ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ. ಇನ್ನು ಬಾಕಿ ಉಳಿದಿರುವ 7.2 ಕಿ.ಮೀ. ಉದ್ದದ ರಸ್ತೆಯನ್ನು ಒಟ್ಟು 5 ಕೋಟಿ ರೂ. ಅನುದಾನದಲ್ಲಿ ಅಗಲಗೊಳಿಸಿ, ಏರು ರಸ್ತೆಯನ್ನು ತಗ್ಗುಗೊಳಿಸಿ, ತಿರುವುಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ 4 ಕೋಟಿ. ರೂ. ಅನುದಾನದಲ್ಲಿ ಕಾಮಗಾರಿ ಆರಂಭಗೊಂಡಿದೆ. ಪಂಜ ಕಡೆಯಿಂದ ಬಾಕಿ ಉಳಿಯುವ 1.5 ಕಿ.ಮೀ. ಉದ್ದ  ರಸ್ತೆಯನ್ನು ಕೂಡ ಅಭಿವೃದ್ಧಿಗೊಳಿಸಲು 1 ಕೋಟಿ. ರೂ. ಅನುದಾನ ಶೀಘ್ರ ಹೊಂದಿಸಿಕೊಡಲಾಗುವುದು ಎಂದಿದ್ದಾರೆ.

error: Content is protected !!

Join the Group

Join WhatsApp Group