ಉಪ್ಪಿನಂಗಡಿ: ಗೆಳತಿಯ ಮನೆಗೆ ಹೋಗಿ ಹಿಂತಿರುಗಿ ಬಂದವನಿಗೆ ಕಾದಿತ್ತು ಶಾಕ್..! ದರೋಡೆಕೋರನೆಂದು ಬಿಂಬಿಸಿ ಹಣ ಲೂಟಿಗೈದ ತಂಡ

crime, arrest, suspected

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 04. ರಾತ್ರಿ ವೇಳೆ ಗೆಳತಿಯ ಮನೆಗೆ ಹೋಗಿ ಹಿಂದಿರುಗುತ್ತಿದ್ದ ಯುವಕನನ್ನು ದರೋಡೆಕೋರನೆಂದು ಬಿಂಬಿಸಿ ಪೊಲೀಸರಿಗೊಪ್ಪಿಸುವೆನೆಂದು ಬೆದರಿಸಿ ಯುವಕನ ಬೈಕ್‌ ನ್ನು ವಶದಲ್ಲಿರಿಸಿ 2 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟು 25 ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಬಂಧಿತನನ್ನು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮುರಿಯಾಳ ಮನೆ ನಿವಾಸಿ ಸಂಶು ಯಾನೆ ಸಂಶುದ್ದೀನ್ (38) ಎಂದು ಗುರುತಿಸಲಾಗಿದೆ.

ಘಟನೆಯ ವಿವರ- ದೂರಿನ ಪ್ರಕಾರ ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಧನುಶ್ ಎಂಬಾತ ಅಗಸ್ಟ್ 31 ರಂದು ಬೆಳ್ತಂಗಡಿ ತಾಲೂಕಿನ ಕರಾಯದ ಮಸೀದಿ ಬಳಿ ತನ್ನ ಬೈಕ್ ನಿಲ್ಲಿಸಿ ಗೆಳತಿಯ ಮನೆಗೆ ಹೋಗಿದ್ದು, ನಸುಕಿನ ವೇಳೆ ತನ್ನ ಮನೆಗೆ ಹಿಂದಿರುಗುವ ಸಲುವಾಗಿ ಬೈಕಿನ ಬಳಿಗೆ ಬಂದಾಗ, ಸಂಶುದ್ದೀನ್ ಹಾಗೂ ಆತನ ಸಂಗಡಿಗ ವಿಡಿಯೋ ಚಿತ್ರೀಕರಣ ಮಾಡುತ್ತಾ ಬಂದು, ತನ್ನನ್ನು ಕೈಯಲ್ಲಿ ಹಿಡಿದುಕೊಂಡು ಸಮೀಪದ ಅಂಗಡಿಯ ಬಳಿಗೆ ಕರೆದೊಯ್ದು, ನೀನು ಯಾರು? ಯಾಕೆ ಇಲ್ಲಿಗೆ ಬಂದದ್ದು? ದರೋಡೆ ಮಾಡಲು ಬಂದಿದ್ದಾ? ಇಲ್ಲಿ ಮೊದಲು ಆಗಿದ್ದ ದರೋಡೆಯನ್ನು ನೀನೇ ಮಾಡಿದ್ದಾ? ಎಂದೆಲ್ಲಾ ಪ್ರಶ್ನಿಸಿದ್ದಾರೆ. ತಾನು ದರೋಡೆಗೆ ಬಂದವನಲ್ಲ ಎಂದು ತಿಳಿಸಿದರೂ ಕೇಳದ ಅವರು ನಾವು ಜನರನ್ನು ಒಟ್ಟುಗೂಡಿಸಿ ನಿನಗೆ ಹೊಡೆಯುತ್ತೇವೆ. ದರೋಡೆ ಮಾಡಲು ಯತ್ನಿಸಿದ್ದಾಗಿ ಪೊಲೀಸರಿಗೆ ದೂರು ನೀಡುತ್ತೇವೆ ಎಂದೆಲ್ಲಾ ಬೆದರಿಸಿದ್ದಾರೆ. ನೀನು 2 ಲಕ್ಷ ಹಣ ಕೊಟ್ಟರೆ, ನಿನ್ನ ಮೇಲೆ ಕೇಸು ಇಲ್ಲದಾಗೆ ಮಾಡುತ್ತೇನೆ ಎಂದು ಹೇಳಿದಾಗ, ಧನುಷ್ ಭಯಪಟ್ಟು ಹಣವನ್ನು ನಾಳೆ ಕೊಡುತ್ತೇನೆಂದು ತಿಳಿಸಿರುತ್ತಾರೆ. ಈ ವೇಳೆ ಆರೋಪಿಯು ಧನುಷ್ ಕೈಯಲ್ಲಿದ್ದ ಬೈಕ್ ಕೀಯನ್ನು ಪಡೆದು ಹಣ ಕೊಟ್ಟ ಬಳಿಕ ಬೈಕ್ ಅನ್ನು ತೆಗೆದುಕೊಂಡು ಹೋಗೆಂದು ತಾಕೀತು ಮಾಡಿದ್ದಲ್ಲದೇ, ಈ ಬಗ್ಗೆ ಏನಾದರೂ ಪೊಲೀಸರಿಗೆ ದೂರು ನೀಡಲು ಹೋದರೆ ನಿನ್ನ ಮೇಲೆ ಬೇರೆಯೇ ಕೇಸು ದಾಖಲಿಸಿ ಒಳಗೆ ಹಾಕಿಸುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾನೆ. ಬಳಿಕ ಹಣವನ್ನು ಪಾವತಿಸಲು ನೆರವಾಗುವ ಸಲುವಾಗಿ ಆರೋಪಿಯು ತನ್ನ ಮೊಬೈಲ್ ನಂಬರ್ ನ್ನು ಧನುಷ್ ಗೆ ನೀಡಿದ್ದು, ಬೆದರಿಕೆಗೆ ಮಣಿದ ಧನುಷ್ ಆರೋಪಿಯು ನೀಡಿದ ಸ್ಕ್ಯಾನರ್ ಗೆ 2000 ರೂ. ಹಾಗೂ 23,000 ರೂ. ದಂತೆ ಒಟ್ಟು 25 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಿದ್ದರು. ಉಳಿಕೆ ಮೊತ್ತವಾದ 1,75,000ರೂ. ವನ್ನು ಮುಂದಿನ 5 ದಿನಗಳ ಅವಧಿಯಲ್ಲಿ ಪಾವತಿಸಬೇಕು ಹಾಗೂ ಬೈಕ್ ದಾಖಲೆಗಳನ್ನು ಒದಗಿಸಬೇಕೆಂದು ಹೆಚ್ಚುವರಿ ಬೇಡಿಕೆ ಇಟ್ಟಾಗ, ಧನುಷ್ ಗೆಳೆಯರೊಡನೆ ಚರ್ಚಿಸಿ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!

Join WhatsApp Group

WhatsApp Share