ಕಡಲ ತೀರದ ಸ್ವಚ್ಛತೆ ಪ್ರತಿಯೊಬ್ಬರ ಆದ್ಯ ಕರ್ತವ್ಯ- ಡಾ|| ಚೂಂತಾರು ಪಣಂಬೂರು ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 12. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಣಂಬೂರು ಘಟಕದ ವತಿಯಿಂದ ಫೆ. 11ರ ಭಾನುವಾರದಂದು ಪಣಂಬೂರು ಕಡಲ ತೀರದಲ್ಲಿ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಸ್ವಚ್ಛತಾ ಅಭಿಯಾನ ಕಾರ್ಯಕ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆಯ ಚೀಫ್ ವಾರ್ಡರ್ ಡಾ|| ಮುರಲೀ ಮೋಹನ್ ಚೂಂತಾರು ಅವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಡಲ ತೀರ ಮತ್ತು ಪರಿಸರವನ್ನು ನಾವು ಸ್ವಚ್ಛವಾಗಿಡಬೇಕು.ಕಡಲ ತೀರದ ಸ್ವಚ್ಚತೆ ಕೇವಲ  ಜಿಲ್ಲಾಡಳಿತದ ಜವಾಬ್ದಾರಿ ಅಲ್ಲ. ಕಡಲ ತೀರದ ಸ್ವಚ್ಚತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಬಾಟಲ್ ತ್ಯಾಜ್ಯಗಳು ಮತ್ತು  ಇತರ ಪ್ಲಾಸ್ಟಿಕ್ ಗಳನ್ನು ಕಡಲ ತೀರದಲ್ಲಿ ಎಸೆದಲ್ಲಿ  ಆಮೆ ಮೀನುಗಳ ಸಹಿತ ಅನೇಕ ಜಲಚರ ಜೀವ ಸಂಕುಲಗಳಿಗೆ  ಮಾರಕವಾಗಿದ್ದು, ಅವುಗಳನ್ನು ಸಮುದ್ರಕ್ಕೆ ಎಸೆಯದಂತೆ ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಹಾಗೂ ಕಸದ ತೊಟ್ಟಿಗಳನ್ನು ಅಲ್ಲಲ್ಲಿ ಇಡುವುದರ ಮುಖಾಂತರ ತ್ಯಾಜ್ಯಗಳು ಸಮುದ್ರದ ನೀರಿಗೆ ಬೀಳದಂತೆ ಜಾಗೃತಿಯನ್ನು ವಹಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಶಿವ ನಾಯ್ಕ ಹಾಗೂ 20 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

error: Content is protected !!
Scroll to Top