ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ – ಕಡ್ಡಾಯ ದಂಡ ವಿಧಿಸಲು ಡಿ.ಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 16. ಶಾಲಾ,ಕಾಲೇಜುಗಳಲ್ಲಿ ಸಿಗರೇಟ್ ಹಾಗೂ ತಂಬಾಕು ಬಳಕೆಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ಬೋರ್ಡ್‍ಗಳನ್ನು ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ಬಳಕೆಯ ಅಪರಾಧಕ್ಕೆ ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್. ಕೆ ಸಲಹೆ ನೀಡಿದರು. ಅವರು ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಶಿಕ್ಷಣ ಸಂಸ್ಥೆಗಳಲ್ಲಿ, ದೇವಸ್ಥಾನಗಳಲ್ಲಿ, ಆಸ್ಪತ್ರೆಯ ಆವರಣದಲ್ಲಿ ತಂಬಾಕು ಮುಕ್ತ ಪ್ರದೇಶ ಎಂದು ಫಲಕಗಳನ್ನು ಅಳವಡಿಸಬೇಕು. ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಸಿಗರೇಟು ಮತ್ತು ತಂಬಾಕು ಬಳಕೆಯಿಂದ ಆಗುವ ಕ್ಯಾನ್ಸರ್ ಮತ್ತು ಬೇರೆ ಬೇರೆ ರೀತಿಯ ಆಗುವ ರೋಗಗಳ ಬಗ್ಗೆ ಹೆಚ್ಚಿನ ಪ್ರಮಾಣದ ಪ್ರಚಾರ ಈಗಾಗಲೇ ಮಾಡಲಾಗುತ್ತಿದೆ ಎಂದು ಹೇಳಿದರು. ಮಹಾನಗರ ಪಾಲಿಕೆಯ ಮುಖಾಂತರ ನಡೆಯುವ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮ ನಡೆಸಲಾಗುತ್ತಿದೆ, ಈ ಯೋಜನೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಚಟಕ್ಕೆ ಒಳಗಾದವರನ್ನು ಎನ್‍ಜಿಓ ಮುಖಾಂತರ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಇದುವರೆಗೆ ಚಟಕ್ಕೆ ಒಳಗಾದವರು 173 ಜನರು ಸಿಗರೇಟ್ ಹಾಗೂ ತಂಬಾಕು ಮುಕ್ತ ಜೀವನ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯ ಅಧಿಕಾರಿ ಡಾ.ಎಚ್.ಎಸ್.ತಿಮ್ಮಯ್ಯ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಜಿಲ್ಲಾ ಸಲಹೆಗಾರ ಪುಂಡಲೀಕ್ ಲಕಾಟೆ, ಶೃತಿ ಸಾಲಿಯಾನ್, ವಿಜಯ್ ಕುಮಾರ್, ವಿದ್ಯಾ ಮತ್ತು ವಿಭಾಗೀಯ ಸಂಯೋಜಕ ಜೇಲ್ ಥಾಮಸ್ ಮತ್ತಿತ್ತರರು ಉಪಸ್ಥಿತರಿದ್ದರು.

error: Content is protected !!
Scroll to Top