ಗಣೇಶ ಹಬ್ಬದ ಸಂದರ್ಭ ಪರಿಸರದ ಸ್ವಚ್ಚತೆಯನ್ನು ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಗಣೇಶ ಹಬ್ಬದ ಆಚರಣೆ ಸಂದರ್ಭದಲ್ಲಿ ಗೌರಿ-ಗಣೇಶನ ವಿಗ್ರಹಗಳನ್ನು ತಯಾರಿಸುವವರು ಹಾಗೂ ಖರೀದಿಸುವಾಗ ಮತ್ತು ವಿಸರ್ಜಿಸುವಾಗ ಸಾರ್ವಜನಿಕರು ಈ ಕೆಳಕಂಡ ಅಂಶಗಳನ್ನು ಗಮನ ಹರಿಸುವಂತೆ ಬಂಟ್ವಾಳ ಪುರಸಭೆ ಕೋರಿದೆ.

ಗೌರಿ-ಗಣೇಶನ ವಿಗ್ರಹಗಳನ್ನು ತಯಾರಿಸುವವರು ತೈಲ ಬಣ್ಣಗಳು, ಅಪಾಯಕಾರಿ ರಾಸಾಯನಿಕ ವಸ್ತುಗಳಿಂದ ಲೇಪಿತವಾಗಿರುವ ವಿಗ್ರಹಗಳನ್ನು ಬಳಸಕೂಡದು ಹಾಗೂ ಪಾಸ್ಟರ್ ಆಫ್ ಪ್ಯಾರೀಸ್ ನಿಂದ ಮಾಡಿದ ಗಣೇಶ ವಿಗ್ರಹಗಳು ಮತ್ತು ಮೂರ್ತಿಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಸಂಪೂರ್ಣ ಮಣ್ಣಿನಿಂದ ಮಾಡಿರುವ ಮತ್ತು ನೈಸರ್ಗಿಕ ಬಣ್ಣ ಬಳಿಸಿರುವ ಗೌರಿ-ಗಣೇಶನ ವಿಗ್ರಹಗಳನ್ನು ಮಾತ್ರ ಖರೀದಿ ಮಾಡಬೇಕು. ನೈಸರ್ಗಿಕವಾದ ಹೂವು, ಹತ್ತಿ ಮುಂತಾದ ಅಲಂಕಾರಿಕ ವಸ್ತುಗಳನ್ನು ಮಾತ್ರ ಬಳಸುವುದು. ಪ್ಲಾಸ್ಟಿಕ್ ಅಲಂಕಾರಿಕ/ತಳಿರು ತೋರಣಗಳನ್ನು ಬಳಸಬಾರದು.
ಸಂಪೂರ್ಣ ಮಣ್ಣಿನಿಂದ ಮಾಡಿರುವ ಗೌರಿ-ಗಣೇಶನ ವಿಗ್ರಹಗಳನ್ನು ಮಾತ್ರ ಜಲ ಮೂಲ (ನದಿ,ಕೆರೆ ಇತ್ಯಾದಿಗಳ) ಬಳಿ ವಿಸರ್ಜಿಸುವುದು. ವಿಗ್ರಹಗಳನ್ನು ವಿಸರ್ಜನೆ ಮಾಡುವಾಗ ಅಲಂಕಾರಿಕ ವಸ್ತುಗಳಾದ ಹೂ, ಹಾರ ಇತ್ಯಾದಿ ಘನತ್ಯಾಜ್ಯಗಳನ್ನು ನಿಗದಿತ ತ್ಯಾಜ್ಯ ವಿಲೇವಾರಿ ಸ್ಥಳಗಳಲ್ಲಿ ವಿಲೇವಾರಿ ಮಾಡತಕ್ಕದ್ದು.

ಧ್ವನಿವರ್ಧಕ ಅಥವಾ ಸಾರ್ವಜನಿಕ ಗಣೇಶ ಪೆಂಡಾಲ್ ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ಧ ಉಂಟು ಮಾಡುವ ಉಪಕರಣಗಳ ಬಳಕೆಗೆ ಅನುಮತಿ ಅಥವಾ ಪರವಾನಿಗೆಯನ್ನು ಕೋರಿ ನಿರ್ದಿಷ್ಟ ಅರ್ಜಿ ನಮೂನೆಯನ್ನು ಸಲ್ಲಿಸಿ ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳತಕ್ಕದ್ದು. ಧ್ವನಿವರ್ಧಕ ಬಳಕೆ ಅಥವಾ ಸಾರ್ವಜನಿಕ ಗಣೇಶ ಪೆಂಡಾಲ್ ಗಳಲ್ಲಿ ಬಳಸುವ ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು, ಪ್ಲಾಸ್ಟಿಕ್ ಧ್ವಜಗಳು, ಅಂಟಿಕೊಳ್ಳುವ ಫಿಲ್ಮ್ ಗಳು, ಡೈನಿಂಗ್ ಟೇಬಲ್ ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ಪ್ಲೇಟ್ ಗಳು, ಪ್ಲಾಸ್ಟಿಕ್ ಕಪ್ ಗಳು ಮತ್ತು ಲೋಟಗಳು, ಪ್ಲಾಸ್ಟಿಕ್ ಚಮಚಗಳು, ಪ್ಲಾಸ್ಟಿಕ್ ಆಮಂತ್ರಣ ಪತ್ರಗಳು, ಇತ್ಯಾದಿ ಪ್ಲಾಸಿಕ್ ವಸ್ತುಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಈ ಮೇಲಿನ ಎಲ್ಲಾ ಅಂಶಗಳನ್ನು ಸಾರ್ವಜನಿಕರು ತಿಳಿದುಕೊಂಡು ನಮ್ಮ ನೆಲ-ಜಲ ಮೂಲಗಳನ್ನು ಕಲುಷಿತವಾಗದಂತೆ ಎಚ್ಚರವಹಿಸಬೇಕು ಮತ್ತು ಪುರಸಭೆಯೊಂದಿಗೆ ಸಹಕರಿಸಬೇಕು ಹಾಗೂ ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡುವಂತೆ ಸಾರ್ವಜನಿಕರಿಗೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

error: Content is protected !!

Join the Group

Join WhatsApp Group