ಚೀತಾ ದಾಳಿಗೆ ಬಾಲಕಿ ಮೃತ್ಯು- ಗಾಯಗೊಳಿಸಿ ಬಿಟ್ಟುಹೋದ ಚಿರತೆ

(ನ್ಯೂಸ್ ಕಡಬ) newskadaba.com  ಚಾಮರಾಜನಗರ, ಜು. 15. ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಮೃತ ಬಾಲಕಿಯನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಗ್ಗಲಿ ಗುಂದಿ ಗ್ರಾಮದ ಸುಶೀಲ ಎಂದು ಗುರುತಿಸಲಾಗಿದೆ. ಬಾಲಕಿಯು ಮನೆಯ ಮುಂಭಾಗ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಬಂದು ಮಗುವನ್ನು ಎಳೆದೊಯ್ದಿದೆ. ಮಗುವಿನ ಚೀರಾಟವನ್ನು ಕೇಳಿದ ಗ್ರಾಮಸ್ಥರು ಹೊರ ಬಂದಾಗ ಚಿರತೆಯನ್ನು ಕಂಡು ಜೋರಾಗಿ ಕೂಗಾಡಿದ್ದಾರೆ. ಈ ವೇಳೆ ಚಿರತೆ ಬಾಲಕಿಯನ್ನು ಗಾಯಗೊಳಿಸಿ ಬಿಟ್ಟು ಹೋಗಿದೆ.

Also Read  ಗಾಂಜಾ ಸೇವನೆ ಐವರು ಪೊಲೀಸ್ ವಶಕ್ಕೆ

ಕೂಡಲೇ ಗಾಯಾಳು ಬಾಲಕಿಯನ್ನು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ತೀವ್ರ ರಕ್ತಸ್ರಾವವುಂಟಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

error: Content is protected !!
Scroll to Top