ಆರೆಸ್ಸೆಸ್ ಗೆ ಬಿಗ್ ಶಾಕ್ ನೀಡಿದ ರಾಜ್ಯ ಸರಕಾರ- ಜನಸೇವಾ ಟ್ರಸ್ಟ್ ಗೆ ನೀಡಲಾಗಿದ್ದ ಜಮೀನಿಗೆ ತಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 14. ಆರ್‌ಎಸ್‌ಎಸ್‌ ಸಂಘಟನೆಯ ಜನಸೇವಾ ಟ್ರಸ್ಟ್‌ಗೆ ಹಿಂದಿನ ಸರಕಾರ ನೀಡಿದ್ದ 35.33 ಎಕರೆ ಗೋಮಾಳ ಭೂಮಿಯನ್ನು ಕಾಂಗ್ರೆಸ್ ತಡೆಹಿಡಿದಿರುವ ಬಗ್ಗೆ ವರದಿಯಾಗಿದೆ.


ಈ ಹಿಂದಿನ ಬಿಜೆಪಿ ಸರ್ಕಾರವು ಆರ್ ಎಸ್‌ಎಸ್ ನ ಜನ ಸೇವಾ ಟ್ರಸ್ಟ್ ಗೆ ಬೆಂಗಳೂರಿನ ಕುರುಬರಹಳ್ಳಿ ಗ್ರಾಮದ ತಾವರಕೆರೆ ಹೋಬಳಿಯಲ್ಲಿ 35 ಎಕರೆ 33 ಗುಂಟೆ ಗೋಮಾಳ ಜಮೀನನ್ನು ನೀಡಿತ್ತು. 2023ರ ಮೇ. 22 ರಂದು ಜಿಲ್ಲಾಧಿಕಾರಿ ಗೋಮಾಳ ಭೂಮಿಯನ್ನು ಜನಸೇವಾ ಟ್ರಸ್ಟ್ ಗೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಜನಸೇವಾ ಟ್ರಸ್ಟ್ ಗೆ 35 ಎಕರೆ, 33 ಗುಂಟೆ ಭೂಮಿ ಮಂಜೂರು ಮಾಡುವುದನ್ನು ಸರಕಾರ ತಡೆಹಿಡಿದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ವಿವಿಧ ಸಂಸ್ಥೆಗಳಿಗೆ ಸರ್ಕಾರಿ ಜಮೀನು ನೀಡಿರುವ ಕುರಿತು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜನಸೇವಾ ಟ್ರಸ್ಟ್‌ ಗೆ 35.33 ಎಕರೆ ಮಂಜೂರು ಮಾಡುವುದನ್ನು ತಡೆಹಿಡಿಯಲಾಗಿದೆ ಎಂದು ಮುಖ್ಯಮಂತ್ರಿಯ ಸೂಚನೆಯನ್ನು ಉಲ್ಲೇಖಿಸಿದ್ದಾರೆ. ಸಿಎಂ ಸೂಚನೆ ಕೇವಲ ಜನಸೇವಾ ಟ್ರಸ್ಟ್‌ಗೆ ಮಾತ್ರ ಅನ್ವಯಿಸುವುದಿಲ್ಲ. ಮಾತ್ರವಲ್ಲದೇ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಹಿಂದೆ ಮಾಡಿದ ಎಲ್ಲಾ ಹಂಚಿಕೆಗಳನ್ನೂ ತಡೆಯಲಾಗಿದೆ ಎಂದು ಹೇಳಿದ್ದಾರೆ.

Scroll to Top