ಧೂಮಪಾನಕ್ಕಿಂತಲೂ ಹೆಚ್ಚು ಅಪಾಯಕಾರಿ ಒಂಟಿತನ ➤ ಸಂವಹನವೇ ದಿವ್ಯೌಷಧ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮೇ3. ಸಹಜ ಒಂಟಿತನ ಭಾವನೆ ಇಂದು ಮಾನಸಿಕ ರೋಗವಾಗಿದೆ. ಇದಕ್ಕೆ ಕಾರಣ ಸಂವಹನದ ಕೊರತೆ.

ಜನರಲ್ಲಿ ಒಂಟಿತನದ ಭಾವನೆ ಸಾಮಾನ್ಯ. ಕೆಲವೊಮ್ಮೆ ಅದು ಹಿತಕರವೆನಿಸುತ್ತದೆ. ಆದರೆ ಇದು ಹೆಚ್ಚಾದರೆ ಮಾರಣಾಂತಿಕ ಅಪಾಯ ತಂದೊಡ್ಡುತ್ತದೆ. ಯಾವ ಮಟ್ಟಿಗೆ ಅಂದರೆ ದಿನವೊಂದಕ್ಕೆ 12 ಸಿಗರೇಟ್​ ಸೇದುವಷ್ಟು ಅಪಾಯ ಒಂಟಿತನದಿಂದ ಉಂಟಾಗುತ್ತದೆ.  ಅಮೆರಿಕದ ಅರ್ಧದಷ್ಟು ವಯಸ್ಕರು ಇದರ ನೇರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅಮೆರಿಕ ವರ್ಷಕ್ಕೆ ಶತಕೋಟಿ ಡಾಲರ್ ಹಣ​ ವ್ಯಯಿಸುತ್ತಿದೆ. ಯುಎಸ್​ ಸರ್ಜನ್​​ ಜನರಲ್ ವರದಿ​ ಪ್ರಕಟಿಸಿದ್ದು, ಒಂಟಿತನವನ್ನು ‘ಸಾರ್ವಜನಿಕ ಆರೋಗ್ಯ ಸಾಂಕ್ರಾಮಿಕ’ ಎಂದು ಘೋಷಿಸಿದ್ದಾರೆ. 81 ಪುಟಗಳ ವರದಿ ಬಿಡುಗಡೆ ಮಾಡಿರುವ ಸರ್ಜನ್​​ ಜನರಲ್ ಡಾ.ವಿವೇಕ್​ ಮೂರ್ತಿ ಅವರ ಕಚೇರಿ, ಒಂಟಿತನ ಎಂಬುದು ಅಮೆರಿಕದಲ್ಲಿ ಕಳವಳಕಾರಿ ಎಂದಿದ್ದಾರೆ.

ಅಸೋಸಿಯೇಟ್​ ಪ್ರೆಸ್​ನೊಂದಿಗೆ ಮಾತನಾಡಿರುವ ಮೂರ್ತಿ, ಒಂಟಿತನ ಎಂಬುದು ಎಲ್ಲರಲ್ಲೂ ಸಾಮಾನ್ಯ. ಬಾಯಾರಿಕೆ ಅಥವಾ ಹಸಿವಿನಂತೆ ಇದೂ ಒಂದು ಭಾವನೆ. ನಾವು ಬದುಕಲು ಬೇಕಾದ ವಸ್ತುಗಳು ಸಿಗದೇ ಹೋದಾಗ ತಮ್ಮ ಮಿದುಳಿಗೆ ತಲುಪುವ ಭಾವನೆಯೇ ಒಂಟಿತನ. ಮಿಲಿಯನ್​ಗಟ್ಟಲೆ ಅಮೆರಿಕನ್ನರು​ ಒಂಟಿತನದ ನೆರಳಲ್ಲಿ ಬದುಕುತ್ತಿದ್ದಾರೆ. ಇದು ಸರಿಯಲ್ಲ. ಅನೇಕರು ಅನುಭವಿಸುತ್ತಿರುವ ಇಂಥ ಅನುಭವದಿಂದ ಅವರನ್ನು ಹೊರಬರುವಂತೆ ಮಾಡಬೇಕು ಎಂಬುದು ನಮ್ಮ ಸಲಹೆ ಎಂದು ಹೇಳಿದರು.

Also Read  ಸಂಗೀತ ನೃತ್ಯ ತರಬೇತಿ ಅರ್ಜಿ ಆಹ್ವಾನ

ಸಮುದಾಯ ಚಟುವಟಿಕೆಯಿಂದ ದೂರ: ಇತ್ತೀಚಿನ ದಿನಗಳಲ್ಲಿ ಜನರು ಆರಾಧನಾ ಕೇಂದ್ರಗಳು, ಸಮುದಾಯ ಸಂಘಟನೆಗಳು ಸೇರಿದಂತೆ ತಮ್ಮ ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದು ಅವರಲ್ಲಿ ಒಂಟಿತನದ ಭಾವನೆ ಹೆಚ್ಚಾಗಲು ಕಾರಣವಾಗಿದೆ. ಕಳೆದ 60 ವರ್ಷಗಳಲ್ಲಿ ಒಂಟಿಮನೆಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ.

ಈ ಪರಿಸ್ಥಿತಿ ಕೋವಿಡ್​-19 ಸಮಯದಲ್ಲಿ ಮತ್ತಷ್ಟು ಬಿಗಡಾಯಿಸಿತು. ಶಾಲೆಗಳು, ಕೆಲಸದ ಸ್ಥಳಗಳೆಲ್ಲ ಮುಚ್ಚಿದ್ದು, ಜನರು ಮನೆಯಲ್ಲಿ ಸ್ನೇಹಿತರು, ಸಂಬಂಧಿಗಳಿಂದ ಪ್ರತ್ಯೇಕವಾಗಿರಬೇಕಾಯಿತು. ಕೋವಿಡ್​ ಸಮಯದಲ್ಲಿ ಜನರು ಆರಿಸಿಕೊಂಡ ಸ್ನೇಹಿತರ ಗುಂಪಿನೊಂದಿಗೂ ಕಾಲ ಕಳೆಯುವ ಸಮಯವನ್ನು ಕಡಿಮೆ ಮಾಡಿದರು ಎಂದು ಸರ್ಜನ್​​ ಜನರಲ್​ ವರದಿ ತಿಳಿಸಿದೆ. ಅಮೆರಿಕ ಮಂದಿ ಎರಡು ದಶಕದ ಹಿಂದೆ ಸ್ನೇಹಿತರೊಂದಿಗೆ ದಿನಕ್ಕೆ 60 ನಿಮಿಷ ಸಮಯ ಕಳೆದರೆ, 2020ರಲ್ಲಿ ದಿನಕ್ಕೆ ಸುಮಾರು 20 ನಿಮಿಷವಷ್ಟೇ ಕಳೆಯುತ್ತಾರೆ.

ಯುವಜನರಲ್ಲಿ ಹೆಚ್ಚು: ಒಂಟಿತನಕ್ಕೆ ಸಾಮಾನ್ಯವಾಗಿ 15ರಿಂದ 24 ವರ್ಷದ ವಯೋಮಾನದ ಮಂದಿ ಹೆಚ್ಚು ತುತ್ತಾಗುತ್ತಿದ್ದಾರೆ. ಈ ವರ್ಗದ ಜನರು ಸ್ನೇಹಿತರೊಂದಿಗೆ ಕಳೆಯುವ ಸಮಯದಲ್ಲಿ ಶೇ 70ರಷ್ಟು ಕುಸಿತ ಕಂಡಿದೆ. ಅಷ್ಟೇ ಅಲ್ಲ, ಒಂಟಿತನದಿಂದ ಅಕಾಲಿಕ ಸಾವನ್ನಪ್ಪುತ್ತಿರುವ ಸಂಖ್ಯೆಯಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಕಳಪೆ ಸಾಮಾಜಿಕ ಸಂಬಂಧ ಹೊಂದಿರುವವರು ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ರೋಗದ ಅಪಾಯ ಹೊಂದಿರುತ್ತಾರೆ ಎಂದು ವರದಿ ಹೇಳುತ್ತದೆ. ಅಲ್ಲದೆ ಇದು ಖಿನ್ನತೆ, ಆತಂಕ ಮತ್ತು ಬುದ್ಧಿಮಾಂದ್ಯತೆಗೂ ಕಾರಣವಾಗಬಹುದು.

Also Read  ಆನಂದ ಭೈರವಿ ದೇವಿಯ ಸ್ಮರಿಸುತ್ತ ಈ ದಿನದ ರಾಶಿ ಫಲ ನೋಡೋಣ.

ಸಂವಹನವೊಂದೇ ಪರಿಹಾರ: ಒಂಟಿತನ ದೂರ ಮಾಡುವ ಕೆಲಸದ ಸ್ಥಳಗಳು, ಶಾಲೆಗಳು, ತಾಂತ್ರಿಕ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಮತ್ತು ಪೋಷಕರು ಸೇರಿದಂತೆ ಇತರೆಡೆಯ ಜನರು ಕೂಡ ತಮ್ಮ ಸಂಪರ್ಕವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬದಲಾವಣೆಗೆ ಒಳಗಾಬೇಕು ಎಂದು ಸರ್ಜನ್​ ಜನರಲ್​ ಸಲಹೆ ನೀಡಿದ್ದಾರೆ. ಜನರು ಸಮುದಾಯದ ಗುಂಪುಗಳಿಗೆ ಸೇರಬೇಕು. ಜನರಲ್ಲಿ ಫೋನ್​ ಬದಲಾಗಿ ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡಬೇಕು. ಉದ್ಯೋಗಿಗಳು ತಮ್ಮ ರಿಮೋಟ್​ ವರ್ಕ್​ಪ್ಲೇಸ್​ ಬಗ್ಗೆಯೂ ಯೋಚಿಸಬೇಕು. ಆರೋಗ್ಯಯುತ ವ್ಯವಸ್ಥೆಗಳು ಈ ಸಂಬಂಧ ತರಬೇತಿ ನೀಡಬೇಕಿದೆ.

ತಾಂತ್ರಿಕತೆ ಹೆಚ್ಚಾದಂತೆ ಒಂಟಿತನವೂ ಹೆಚ್ಚಿದೆ. ಸಾಮಾಜಿಕ ಮಾಧ್ಯಮಗಳು ಒಂಟಿತನವನ್ನು ಹೆಚ್ಚಿಸಿವೆ. ವ್ಯಕ್ತಿಯ ಸಂವಹನಕ್ಕೆ ಯಾವುದೇ ಪರ್ಯಾಯವಿಲ್ಲ. ಹೆಚ್ಚೆಚ್ಚು ತಂತ್ರಜ್ಞಾನವನ್ನು ಬಳಸುವ ಮೂಲಕ ನಾವು ವ್ಯಕ್ತಿಗಳ ನಡುವಿನ ಸಂವಹನವನ್ನು ಕಡಿಮೆ ಮಾಡಿದ್ದೇವೆ. ಇದು ಸಂಬಂಧಗಳ ಜೊತೆಗೆ ಮಾನಸಿಕವಾಗಿಯೂ ವ್ಯಕ್ತಿಯನ್ನು ದುರ್ಬಲಗೊಳಿಸುತ್ತಿವೆ.

error: Content is protected !!
Scroll to Top