ಸುಳ್ಯದಲ್ಲಿ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿದ ನಂದಕುಮಾರ್ ➤ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ ಏನು?

(ನ್ಯೂಸ್ ಕಡಬ) newskadaba.com. ಸುಳ್ಯ, ಏ.20. ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತೀರ್ಮಾನ ಮಾಡಿದ್ದ ಕೆಪಿಸಿಸಿ ಸದಸ್ಯ ಹಾಗೂ  ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹೆಚ್.ಎಂ.ನಂದಕುಮಾರ್ ಚುನಾವಣಾ ಸ್ಪರ್ಧೆಯಿಂದ  ಹಿಂದೆ ಸರಿದಿದ್ದಾರೆ.

ನಂದಕುಮಾರ್ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,  ನಂದಕುಮಾರ್ ಬಣ  ಚುನಾವಣಾ ಕಣದಲ್ಲಿ‌ ತಟಸ್ಥರಾಗಿ ಇರಲು ನಿರ್ಧರಿಸಲಾಗಿದೆ. ಪಕ್ಷೇತರರಾಗಿ ಸ್ಪರ್ಧೆ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ ಹಿನ್ನಲೆಯಲ್ಲಿ ಅವರ ಮಾತಿಗೆ ಬೆಲೆ ಕೊಟ್ಟು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ನಂದಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿದರೂ ಹೆಚ್ ಎಂ ನಂದಕುಮಾರ್ ಅವರಿಗೆ ಬಿ ಫಾರಂ ಸಿಗಬೇಕು ಎಂದು ಹೈಕಮಾಂಡ್ ಬಳಿ ಬೇಡಿಕೆ ಇಟ್ಟು ಹೋರಾಟ ಮಾಡಿದ್ದೇವೆ. ಆದರೆ ಕೊನೆಯವರೆಗೆ ನಾವೆಲ್ಲರೂ ಬದಲಾವಣೆಯ ನಿರೀಕ್ಷೆಯಲ್ಲಿದ್ದೆವು.ಆದರೆ ಬಿ ಫಾರಂ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಲ್ಲದೆ ತಟಸ್ಥರಾಗಿ ಉಳಿಯುವ ನಿರ್ಣಯಕ್ಕೆ ಬಂದಿರುತ್ತೇವೆ ಎಂದು ನಂದಕುಮಾರ್ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

Scroll to Top