ಆತೂರು ದಿಕ್ರ್‌ ಹಲ್ಕಾ ವಾರ್ಷಿಕೋತ್ಸವ ► ದ್ಸಿಕ್ರ್‌, ಸ್ವಲಾತ್ ನಿಂದ ಹೃದಯ ಪರಿಪೂರ್ಣತೆ: ತ್ವಾಖಾ ಅಹ್ಮದ್ ಮೌಲವಿ

(ನ್ಯೂಸ್ ಕಡಬ) newskadaba.com ಕಡಬ, ಜ.07. ದಿಕ್ರ್‌, ಸ್ವಲಾತ್ ಹೇಳುವ ಮೂಲಕ ನಮ್ಮ ಆತ್ಮ ಶುದ್ಧೀಕರಣದೊಂದಿಗೆ ಹೃದಯ ಪರಿಪೂರ್ಣತೆ ಆಗುವುದರ ಜೊತೆಗೆ ಪುಣ್ಯ ಸಂಪಾದನೆ ಲಭಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮೌಲವಿ ಅಲ್ಖಾಸಿಮಿ ಅಲ್ಅಝ್ಹರಿ ಹೇಳಿದರು.

ಅವರು ಗುರುವಾರ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳ ಮೊದಲ ಗುರುವಾರ ರಾತ್ರಿ ಆಚರಿಸಿಕೊಂಡು ಬರುತ್ತಿರುವ ದಿಕ್ರ್‌ ಹಲ್ಕಾ ಇದರ 17ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೈಜ ಮುಸ್ಲಿಂ ಆಗಿರುವಾತ, ಅಲ್ಲಾಹನ ಬಗ್ಗೆ ಪ್ರೀತಿ ಇರುವಾತ ನೆಬಿವರ್ಯರ ಹೆಸರಿನಲ್ಲಿ, ಅಲ್ಲಾಹನ ಹೆಸರಿನಲ್ಲಿ ಹೇಳುವ ದಿಕ್ರ್‌ನಿಂದ ದೂರ ಇರಲಾರ ಎಂದ ಅವರು ಊರಿನ ಮಸೀದಿ, ಮೊಹಲ್ಲಾಗಳಲ್ಲಿ ದಿಕ್ರ್‌, ಸ್ವಲಾತ್ ಕಾರ್ಯಕ್ರಮ ನಡೆಯುವಂತಿದ್ದರೆ ಆ ಊರು ಸಂಸ್ಕಾರಯುತವಾಗಿ ಇರುತ್ತದೆ. ಅಲ್ಲಿ ಅಭಿವೃದ್ಧಿ ಹೊಂದುತ್ತದೆ ಈ ನಿಟ್ಟಿನಲ್ಲಿ ಇಲ್ಲಿನ ದಿಕ್ರ್‌ ಹಲ್ಕಾದ ಪಾವಿತ್ರತೆ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದ್ದು, ದಿಕ್ರ್‌ನ ವಿಶೇಷತೆಗೆ ಸಾಕ್ಷಿಯಾಗಿದೆ ಎಂದರು. ದಿಕ್ರ್‌ ಹಲ್ಕಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ ಪ್ರತೀ ತಿಂಗಳ ದಿಕ್ರ್‌ ಕಾರ್ಯಕ್ರಮಗಳಿಗೆ ಆಗಮಿಸಿ ತನ್ನ ಸಮಸ್ಯೆ, ಅಸಹಾಯಕತೆಗಳನ್ನು ತೋಡಿಕೊಂಡು ಅದರಿಂದ ಮುಕ್ತಿ ಹೊಂದಿರುವ ನೂರಾರು ಉದಾಹರಣೆಗಳು ನಮ್ಮ ಮುಂದೆ ಇದ್ದು ಅಜ್ಮೀರ್ ಖ್ವಾಜಾ ಹೆಸರಿನಲ್ಲಿ ನಡೆಯುವ ಈ ಕಾರ್ಯಕ್ರಮದಿಂದಾಗಿ ಆತೂರು ಪಾವಿತ್ರತೆಯ ಕೇಂದ್ರವಾಗಿ ಹೊರ ಹೊಮ್ಮಿದೆ ಎಂದರು.

ಹಿರಿಯ ಧಾರ್ಮಿಕ ವಿದ್ವಾಂಸ ಡಾ. ಹಾಜಿ ಶಾಹ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ಕಾಸರಗೋಡು ಪೊಸೋಟು ಜುಮಾ ಮಸೀದಿಯ ಮುದರ್ರಿಸ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ದಿಕ್ರ್‌ ಮಜ್ಲಿಸ್ನಲ್ಲಿ ದುವಾಃ ನೆರವೇರಿಸಿ ಮಾತನಾಡಿ ದಿಕ್ರ್‌ಗೆ ಇರುವ ಪಾವಿತ್ರತೆ ಬಗ್ಗೆ ತಿಳಿಸಿದರು. ಗಂಡಿಬಾಗಿಲು ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಸಯ್ಯದ್ ಅನಸ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಪಯ್ಯನ್ನೂರು ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದಿಕ್ ಅಲ್ಅಝ್ಹರಿ ಧಾರ್ಮಿಕ ಉಪನ್ಯಾಸ ನೀಡಿದರು.  ಸಮಾರಂಭದಲ್ಲಿ ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಸದಸ್ಯ ಕೆ.ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಆತೂರು ತದ್ಬೀರುಲ್ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಅಝ್ಹರಿ, ಆತೂರುಬೈಲ್ ಖಮರುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಹಂಝ  ಮುಸ್ಲಿಯಾರ್, ಕುಂಡಾಜೆ ಮಸೀದಿ ಖತೀಬ್ ಮುನೀರ್ ಅನ್ವರಿ, ಕುದ್ಲೂರು ಎಂ.ಜೆ.ಎಂ. ಮಸೀದಿ ಖತೀಬ್ ಮಹಮ್ಮದ್ ನಿಯಾಝ್ ಫೈಝಿ, ಅಧ್ಯಕ್ಷ ಅಬ್ದುಲ್ ರಹಿಮಾನ್ ಮರ್ವೇಲು, ಕುದ್ಲೂರು ಬಿ.ಜೆ.ಎಂ. ಮಸೀದಿ ಖತೀಬ್ ಯಾಕೂಬ್ ಮಿಸ್ಬಾಯಿ, ಆತೂರು ಬದ್ರಿಯಾ ಸ್ಕೂಲ್ ಸಂಚಾಲಕ ಆದಂ ಹಾಜಿ, ನೀರಾಜೆ ಮದ್ರಸದ ಅಬ್ದುಲ್ ರಜಾಕ್ ದಾರಿಮಿ, ಅಧ್ಯಕ್ಷ ಇಬ್ರಾಹಿಂ ಆತೂರು, ಕೆಮ್ಮಾರ ಹಿದಾಯತುಲ್ ಇಸ್ಲಾಂ ಮದ್ರಸ ಅಧ್ಯಕ್ಷ ಎನ್.ಎ. ಇಸಾಕ್ ಉಪಸ್ಥಿತರಿದ್ದರು.

ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್ ಬಿ.ಕೆ. ಸ್ವಾಗತಿಸಿ, ಕಾರ್ಯದರ್ಶಿ ಸಿರಾಜುದ್ದೀನ್ ಬಡ್ಡಮೆ ವಂದಿಸಿದರು. ಹಾಜಿ ಕೆ. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group