ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 17. ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಟೆಪುರ ಬಸ್‌ ನಿಲ್ದಾಣದ ಸಮೀಪ ನಡೆದಿದೆ.

ಹತ್ಯೆಗೆ ಸಂಬಂಧಿಸಿ ಆಕೆಯೊಂದಿಗೆ ವಾಸಿಸುತ್ತಿದ್ದ ದೆಹಲಿ ಮೂಲದ ನಯೀಮ್‌ ಎಂಬಾತ ಈ ಹತ್ಯೆಯನ್ನು ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಿಂದ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್‌ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಸಂಪರ್ಕಿಸಿ, ಹಮೀದ್‌ ಎಂಬವರ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಈ ಸಂದರ್ಭ ನಾವು ಬಟ್ಟೆ ವ್ಯಾಪಾರ ನಡೆಸುವವರು, ಇನ್ನೇನು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿದ್ದರು. ಇದೀಗ ದೆಹಲಿ ಮೂಲದ 35-40 ರ ಹರೆಯದ ಮಹಿಳೆ ಹತ್ಯೆಯಾಗಿದ್ದು, ವ್ಯಕ್ತಿಯು ನೀಡಿರುವ ಆಧಾರ್‌ ಕಾರ್ಡ್‌ನ ಆಧಾರದಲ್ಲಿ ಮಹಿಳೆಯೊಂದಿಗೆ ಬಂದಿದ್ದ ವ್ಯಕ್ತಿ ನಯೀಮ್‌ (35) ಎಂದು ಗುರುತಿಸಲಾಗಿದ್ದು, ಈತ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇವರು ಎರಡು ದಿನಗಳಿಂದ ವಾಸವಾಗಿದ್ದ ಬಾಡಿಗೆ ಮನೆಯಿಂದ ಯಾರೂ ಹೊರಗಡೆ ಕಾಣಿಸದೇ ಇದ್ದಾಗ, ಪಕ್ಕದ ಮನೆಯ ಯುವಕನೋರ್ವ ಮನೆ ಬಳಿ ತೆರಳಿ ಪರಿಶೀಲಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆರಳಚ್ಚು ತಜ್ಞರು, ಫಾರೆನ್ಸಿಕ್‌ ವಿಭಾಗ, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

Scroll to Top