ಮಂಗಳೂರು: ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆಯ ಇರಿದು ಕೊಲೆ ► ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.30. ಮಹಿಳೆಯೋರ್ವರಿಗೆ ಚೂರಿಯಿಂದ ಇರಿದು ಕೊಲೆಗೈದು ಚಿನ್ನಾಭರಣ ದೋಚಿದ ಘಟನೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮದಲ್ಲಿ ಶನಿವಾರದಂದು ನಡೆದಿದೆ.







ಕೊಲೆಗೀಡಾದ ಮಹಿಳೆಯನ್ನು ಐಕಳ ಬಿರ್ಕಿಲ್ ಮನೆ ನಿವಾಸಿ ಸುಧಾಮ ಶೆಟ್ಟಿಯ ಎಂಬವರ ಪತ್ನಿ ವಸಂತಿ ಶೆಟ್ಟಿ (58) ಎಂದು ಗುರುತಿಸಲಾಗಿದೆ. ವಸಂತಿ ಶೆಟ್ಟಿ ಅವರ ಕುತ್ತಿಗೆ ಮತ್ತು ಕೈಯಲ್ಲಿರುವ ಬಂಗಾರದ ಅಭರಣಗಳನ್ನು ಕೊಲೆಗಡುಕರು ದೋಚಿದ್ದಾರೆ. ಇನ್ನೊಂದು ಕೊಣೆಯಲ್ಲಿದ್ದ ಕಪಾಟನ್ನು ಜಾಲಾಡಿದ್ದಾರೆ, ಮೃತ ದೇಹದ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು ಮನೆಯ ಮುಂಭಾಗದ ಕೋಣೆ ಮತ್ತು ಮನೆಯ ಹೊರಗಡೆಯ ಗೋಡೆ ಮತ್ತು ನೆಲದಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ಮನೆಯ ಹೊರ ಬಾಗದಲ್ಲಿ ವಸಂತಿ ಶೆಟ್ಟಿಯವರ ಮೊಬೈಲ್ ದೊರೆತಿದ್ದು, ಮೃತ ದೇಹದ ಸಮೀಪದಲ್ಲೇ ಸೋಫಾದ ಅಡಿಯಲ್ಲಿ ಸ್ಟೀಲ್ ಚೂರಿ ಬಿದ್ದಿತ್ತು. ಸ್ಥಳಕ್ಕೆ ಆಗಮಿಸಿದ ಶ್ವಾನ ಮನೆಯ ಹಿಂಭಾಗದ ಮೂಲಕ ಮುಂಭಾಗಕ್ಕೆ ಬಂದು, ಅನತಿ ದೂರ ಸಾಗಿ ವಾಪಾಸಾಗಿದೆ.






ಮನೆಯಲ್ಲಿ ವಸಂತಿ ಶೆಟ್ಟಿ ಮತ್ತು ಪತಿ ಸುದಾಮ ಶೆಟ್ಟಿ ಇಬ್ಬರು ವಾಸಿಸುತ್ತಿದ್ದು, ಸುಧಾಮ ಶೆಟ್ಟಿಯವರು ಎಲ್.ಐ.ಸಿ ಏಜೆಂಟ್ ಆಗಿದ್ದು ಪ್ರತೀ ದಿನ ಬೆಳಿಗ್ಗೆ ಹೊರಟವರು ಮದ್ಯಾಹ್ನ ಸುಮಾರು 3 ಗಂಟೆಗೆ ವಾಪಾಗುತ್ತಿದ್ದರು. ಇಂದು ಮಧ್ಯಾಹ್ನ ಸುಮಾರು 12.30ಕ್ಕೆ ಸುಧಾಮ ಶೆಟ್ಟಿಯವರ ಮೊಬೈಲಿಗೆ ಪತ್ನಿ ವಸಂತಿಯವರ ಕರೆ ಬಂದಿದ್ದು ಕೂಡಲೇ ಕರೆ ಕಟ್ ಆಗಿದೆ, ಸುಧಾಮ ಶೆಟ್ಟಿ ವಾಪಾಸ್ ಕರೆ ಮಾಡುವಾಗ ಯಾರೂ ಸ್ವೀಕರಿಸದೆ ಇದ್ದ ಕಾರಣ ಕಿನ್ನಿಗೋಳಿಯ ತಮ್ಮ ಗೆಳೆಯರೊಬ್ಬರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ. ಈ ಸಂದರ್ಭ ವಸಂತಿ ಶೆಟ್ಟಿ ಅವರು ತಮ್ಮ ಮನೆಯ ಮುಂಭಾಗದ ಕೊಣೆಯಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ. ಕೊಲೆ ಮಾಡಿದವರು ಚಿನ್ನದ ಅಭರಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಕೈಂ ಡಿ.ಸಿ.ಪಿ ಉಮಾ ಪ್ರಶಾಂತ್, ಪಣಂಬೂರು ಎ.ಸಿ.ಪಿ ರಾಜೇಂದ್ರ, ಮುಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ, ಮೂಡಬಿದ್ರೆ ಠಾಣಾಧಿಕಾರಿ ರಾಮಚಂದ್ರ ನಾಯಕ್, ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದವರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top