ಗಡಿನಾಡ ಕನ್ನಡಿಗರಿಗೆ ಶೀಘ್ರ 100 ಕೋಟಿ ಬಿಡುಗಡೆ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.03. ಗಡಿಭಾಗದ ಕನ್ನಡಿಗರ ಸಮಸ್ಯೆ ನಿವಾರಣೆಗೆ ಅನುಕೂಲವಾಗುವಂತೆ ಮತ್ತು ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ ಸೇರಿದಂತೆ ಕನ್ನಡ ಅಭಿವೃದ್ಧಿಗೆ ಪೂರಕವಾಗುವಂತೆ 2023 ಮಾರ್ಚ್‌ 31ರೊಳಗೆ ನೂರು ಕೋಟಿ ರು.ಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ‘ಗಡಿನಾಡ ಚೇತನ’ ಪ್ರಶಸ್ತಿ ಪ್ರದಾನ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ನಮ್ಮ ಗಡಿಯಲ್ಲಿರುವ ಕನ್ನಡಿಗರ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕು. ಗಡಿಭಾಗದಲ್ಲಿ ಇದ್ದಾರೆಂಬ ಕಾರಣಕ್ಕೆ ಮನಸ್ಸಿನಿಂದ ದೂರ ಮಾಡುವುದು ಸರಿಯಲ್ಲ. ಕರ್ನಾಟಕದ ಮುಖ್ಯಮಂತ್ರಿಯಾಗಿ ನಮ್ಮ ಗಡಿಯಲ್ಲಿರುವ ಜನರಿಗೆ ಎಲ್ಲ ಸೌಕರ್ಯಗಳು, ಅವಕಾಶಗಳನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದೇನೆ. ಗಡಿಭಾಗದ ಜನರ ಅಭಿವೃದ್ಧಿಗೆಂದು ಈಗಾಗಲೇ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 25 ಕೋಟಿ ರು.ಗಳನ್ನು ಕೊಟ್ಟಿದ್ದೇವೆ. ಈಗ 100 ಕೋಟಿ ರು.ಗಳನ್ನು ಇದೇ ವರ್ಷ ಮಾರ್ಚ್‌ 31ರೊಳಗೆ ಕೊಡುತ್ತೇನೆ. ಅದಕ್ಕೆ ಬೇಕಾದ ಕ್ರಿಯಾಯೋಜನೆಯನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದವರು ರೂಪಿಸುವಂತೆ ಸೂಚಿಸಿದ್ದೇನೆ. ಮುಂದಿನ ವರ್ಷವೂ ಕೂಡ 100 ಕೋಟಿ ರು.ಗಳನ್ನು ಕೊಡುತ್ತೇನೆ. ದುಡ್ಡು ಕೊಡುವುದು ಮುಖ್ಯವಲ್ಲ. ಅದು ಸದುಪಯೋಗವಾಗಬೇಕು ಎಂದು ಹೇಳಿದರು ಎನ್ನಲಾಗಿದೆ.

 

error: Content is protected !!

Join the Group

Join WhatsApp Group