ನೆಲ್ಯಾಡಿ-ಬಲ್ಯ ರಸ್ತೆ ಕಾಮಗಾರಿಗೆ ಬಿಡುಗಡೆಯಾಯಿತು 6 ಕೋಟಿ ಅನುದಾನ ► ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ನಡೆಯಿತು ಗುದ್ದಲಿಪೂಜೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.13. ಕೇಂದ್ರ ರಸ್ತೆ ನಿಧಿ(ಸಿಆರ್ಎಫ್)ಯಿಂದ ಬಿಡುಗಡೆಗೊಂಡ 6 ಕೋಟಿ ರೂ.ಅನುದಾನದಲ್ಲಿ ನಡೆಯುವ ನೆಲ್ಯಾಡಿ-ಬಲ್ಯ ರಸ್ತೆಯ ಅಗಲೀಕರಣ ಹಾಗೂ ಮರು ಡಾಮರೀಕರಣ ಕಾಮಗಾರಿಗೆ ಮಂಗಳವಾರದಂದು ಹೊಸಮಜಲುನಲ್ಲಿ ಗುದ್ದಲಿಪುಜೆ ನೆರವೇರಿಸಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಶಾಸಕ ಎಸ್.ಅಂಗಾರರವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಿಆರ್ಎಫ್ ಯೋಜನೆಯಡಿ ಸಂಸದ ನಳಿನ್ಕುಮಾರ್ ಕಟೀಲ್ 20 ಕೋಟಿ ರೂ. ಅನುದಾನ ತರಿಸಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರವಿದ್ದ ವೇಳೆ ಸಿಆರ್ಎಫ್ ಯೋಜನೆಯಡಿ ಬಿಡುಗಡೆಗೊಂಡ ಅನುದಾನ ಕೇವಲ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳುತ್ತಿತ್ತು. ಆದರೆ ಈಗ ಸಂಸದ ನಳಿನ್ ಕುಮಾರ್ ಕಟೀಲು ರವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡುತ್ತಿದ್ದಾರೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ತಾವೇ ಅನುದಾನ ತರಿಸಿರುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. 50ಕ್ಕೂ ಹೆಚ್ಚು ವರ್ಷ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಗ್ರಾ.ಪಂ.ನಿಂದ ಆರಂಭಗೊಂಡು ಕೇಂದ್ರದ ತನಕವೂ ಕಾಂಗ್ರೆಸ್ ಆಡಳಿತವಿತ್ತು. ಈ ಅವಧಿಯಲ್ಲಿ ಅನುದಾನ ಮಂಜೂರುಗೊಳಿಸಲು ಸಾಧ್ಯವಾಗದೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಇತರೇ ಕಾಂಗ್ರೆಸ್ ಮುಖಂಡರು ಈಗ ತಾವೇ ಅನುದಾನ ತಂದಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

1994ರ ಬಳಿಕ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತವಿದ್ದ ಅವಧಿಯಲ್ಲಿ ಮಂಜೂರುಗೊಂಡು ಪೂರ್ಣಗೊಂಡ ಕಾಮಗಾರಿಗಳನ್ನು ಕಾಂಗ್ರೆಸ್ ಈಗ ಉದ್ಘಾಟಿಸಿ ಪ್ರಚಾರ ಗಿಟ್ಟಿಸುತ್ತಿದೆ ಎಂದು ಹೇಳಿದ ಅಂಗಾರರವರು, ಉದನೆ ಹಾಗೂ ಸುಳ್ಯ ತಾಲೂಕಿನ ಅಂಗಡಿ ಮಜಲು ಎಂಬಲ್ಲಿಗೆ ಕೆಆರ್ಡಿಸಿಎಲ್ನಿಂದ ಸೇತುವೆ ಮಂಜೂರುಗೊಳಿಸಿರುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ನಬಾರ್ಡ್ ಹಾಗೂ ಕೆಆರ್ಡಿಸಿಎಲ್ನಿಂದ ಕ್ಷೇತ್ರದ ಶಾಸಕರ ವ್ಯಾಪ್ತಿಗೆ ಬರುವ ಅನುದಾನವನ್ನೂ ಜಿಲ್ಲಾ ಉಸ್ತುವಾರಿ ಸಚಿವರು ಬೇಕಾದ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಸುಬ್ರಹ್ಮಣ್ಯದಿಂದ ಮರ್ದಾಳ ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೂಟೇಲ್ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಕೆಆರ್ಡಿಸಿಎಲ್ನಿಂದ 3.75 ಕೋಟಿ ರೂ. ಮಂಜೂರುಗೊಂಡಿದೆ. ಈ ಅನುದಾನ ಎಲ್ಲಿಗೆ ಹೋಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಜನರಿಗೆ ತಿಳಿಸಲಿ ಎಂದು ಅಂಗಾರ ಇದೇ ವೇಳೆ ಹೇಳಿದರು. ಬಲ್ಯ-ನೆಲ್ಯಾಡಿ ರಸ್ತೆಯಲ್ಲಿ ಬಲ್ಯದಿಂದ 2 ಕಿ.ಮೀ.ಈಗಾಗಲೇ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಗಲೀಕರಣ ಹಾಗೂ ಡಾಮರೀಕರಣಗೊಂಡಿದೆ. ಇದೀಗ ಸಿಆರ್ಎಫ್ನ 6 ಕೋಟಿ ರೂ.ಅನುದಾನದಲ್ಲಿ ಉಳಿದ ಭಾಗದ ಅಗಲೀಕರಣ ಹಾಗೂ ಮರು ಡಾಮರೀಕರಣ ಕಾಮಗಾರಿ ಇನ್ನು 2-3 ದಿನದಲ್ಲಿ ಆರಂಭಗೊಳ್ಳಲಿದೆ. ಅಗಲೀಕರಣ ಕಾಮಗಾರಿಗೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಅಂಗಾರ ಹೇಳಿದರು.

Also Read  ಕಡಬ: ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ► ಮೋದಿ ದುರಾಡಳಿತದ ವಿರುದ್ಧ ಮತದಾರರನ್ನು ಜಾಗೃತಗೊಳಿಸಿ - ರಮಾನಾಥ ರೈ

ತಾ.ಪಂ.ಮಾಜಿ ಸದಸ್ಯ ಭಾಸ್ಕರ ಎಸ್.ಗೌಡ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಆತೂರು, ಬಿಜೆಪಿ ದ.ಕ.ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಉಪಾಧ್ಯಕ್ಷೆ ವಾಣಿ ಎನ್., ಸದಸ್ಯರುಗಳಾದ ಶ್ರೀನಿವಾಸ ಪುಜಾರಿ, ಲೋಕೇಶ್ ಬಾಣಜಾಲು, ಮೋಹಿನಿ ಮಾನಡ್ಕ, ಅನ್ನಮ್ಮ ಪಿ.ವಿ., ಶೈಲಾ ಕೆಮ್ಮನಮಕ್ಕಿ, ವಾರಿಜಾ ಪರಂತಮೂಲೆ, ಸೋನಿಯಾ, ಜಾನಕಿ, ಚೆನ್ನಪ್ಪ, ರವಿಪ್ರಸಾದ್ ಗುತ್ತಿನ ಮನೆ, ಬಿಜೆಪಿ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ಬಿಜೆಪಿ ಕಡಬ ಶಕ್ತಿಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಯಕ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ., ನೆಲ್ಯಾಡಿ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಶಿವಪ್ರಸಾದ್ ಪುತ್ತಿಲ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ನಿರ್ದೇಶಕ ದಿನೇಶ್ ಶೆಟ್ಟಿ, ನಿವೃತ್ತ ಶಿಕ್ಷಕ ರವೀಂದ್ರ ಟಿ., ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯರುಗಳಾದ ಸುಂದರ ಗೌಡ ಅತ್ರಿಜಾಲು, ರವಿಪ್ರಸಾದ್ ಶೆಟ್ಟಿ ರಾಮನಗರ, ದೋಂತಿಲ ದೇವಸ್ಥಾನದ ಅರ್ಚಕ ಪದ್ಮನಾಭ ನೂಜಿನ್ನಾಯ, ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್ನ ಮಾಲಕ ಸುಬ್ರಹ್ಮಣ್ಯ ಆಚಾರ್, ಪ್ರಮುಖರಾದ ಮೋಹನ್ ಕುಮಾರ್ ಡಿ., ಬಾಲಕೃಷ್ಣ ಗೌಡ ಒಕ್ಕಲಿಗ, ಪ್ರಕಾಶ್ ರಾಮನಗರ, ಸಂಜೀವ ಶೆಟ್ಟಿ ಗುತ್ತುಬಲ್ಯ, ಗಂಗಾಧರ ಪುಚ್ಚೇರಿ, ಗಣೇಶ್ ಪುಜಾರಿ ಪೊಸೊಳಿಗೆ, ಪ್ರವೀಣ್ ದೋಂತಿಲ ಸೇರಿದಂತೆ ಹಲವು ಮಂದಿ ಈ ವೇಳೆ ಉಪಸ್ಥಿತರಿದ್ದರು

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ

ಎಪಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top